ಬೆಂಗಳೂರು: ನಿವೃತ್ತ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಕೊಲೆಗೈದ ದುಷ್ಕರ್ಮಿಗಳು ಪರಾರಿಯಾದ ಘಟನೆಯೊಂದು ನಗರದ ವಿದ್ಯಾರಣ್ಯಪುರ ಅಂಬಾ ಭವಾನಿ ದೇವಸ್ಥಾನದ ಬಳಿ ನಡೆದಿದೆ.
60 ವರ್ಷದ ಪ್ರಸನ್ನ ಕುಮಾರಿ ಕೊಲೆಯಾದ ನಿವೃತ್ತ ಶಿಕ್ಷಕಿ. ನಿನ್ನೆ ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೊಲೆ ಮಾಡಿ ಆಕೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಸದ್ಯ ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನಿವೃತ್ತ ಶಿಕ್ಷಕಿ ಪ್ರಸನ್ನ ಕುಮಾರಿ ಅವರು ವಿಜಯವಾಡ ಮೂಲದವರು ಎಂದು ತಿಳಿದುಬಂದಿದೆ. ಅವರು ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಇತ್ತೀಚಿಗೆ ನಿವೃತ್ತಿಯಾಗಿದ್ದರು. ಒಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದರು.
ನಿನ್ನೆ ದುಷ್ಕರ್ಮಿಗಳು ಅವರ ನಿವಾಸಕ್ಕೆ ಬಂದು ಈ ಪಾಪದ ಕೆಲಸ ಮಾಡಿದ್ದಾರೆ. ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.







