ಮಂಗಳೂರು: ಪಂಚ ದ್ರಾವಿಡ ಭಾಷೆಯಲ್ಲಿಯೇ ತುಳುವಿಗೆ ಬಹಳ ಉನ್ನತ ಸ್ಥಾನವಿದೆ. ಕರ್ನಾಟಕದಲ್ಲಿ ತುಳು ಸಾಹಿತ್ಯ ಅಕಾಡೆಮಿಯೊಂದನ್ನು ಬಿಟ್ಟರೆ ಉಳಿದಂತೆ ಸರಕಾರ ಯಾವುದೇ ರೀತಿಯಲ್ಲಿ ನೆರವಾಗಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಬೇಸರ ವ್ಯಕ್ತಪಡಿಸಿದರು.
ಅವರು ಭಾನುವಾರ ನಗರದ ಉರ್ವ ಸ್ಟೋರ್ನಲ್ಲಿರುವ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಜೈ ತುಳುನಾಡು ಮಂಗಳೂರು ಆಶ್ರಯದಲ್ಲಿ ತುಲುವೆರೆ ಆಟಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ದಯಾನಂದ ಜಿ ಕತ್ತಲ್ಸಾರ್, ಕರ್ನಾಟಕ ಸರಕಾರ ತುಳು ಅಕಾಡೆಮಿಯೊಂದನ್ನು ಕೊಟ್ಟಿದೆ. ಅದರಲ್ಲಿ ತುಳುವಿನ ಸಂಸ್ಕೃತಿ ಸೇರಿದಂತೆ ಇತರ ವಿಚಾರಗಳಿಗೆ ಗಮನ ನೀಡಲು ಅಗುತ್ತಿಲ್ಲ. ಈ ನಿಟ್ಟಿನಲ್ಲಿ ಜೈ ತುಳುನಾಡು ಸಂಘಟನೆಯವರು ತುಳು ಲಿಪಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. 250 ಶಿಕ್ಷಕರ ಮೂಲಕ 25 ಸಾವಿರಕ್ಕೂ ಅಧಿಕ ಮಂದಿಗೆ ತುಳು ಲಿಪಿ ಕಲಿಸುವ ಕೆಲಸ ಮಾಡುವ ಜತೆಯಲ್ಲಿ ತುಳು ಸಂಸ್ಕೃತಿ ವಿಚಾರಕ್ಕೆ ಸಾಕಷ್ಟು ದುಡಿಯುತ್ತಿದ್ದಾರೆ ಎಂದು ಶ್ಲಾಘಿಸಿದರು.






