ಕೋಟ: ಕೊರಗ ಸಮುದಾಯದವರ ಮೇಲೆ ಪೊಲೀಸ್ ಹಲ್ಲೆಯನ್ನು ತೀವ್ರವಾಗಿ ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೆಂದ್ರ ಕೋಟ ಎಸ್ಐ ನಾನೇ ಸುಪ್ರೀಂ ಅನ್ನುವಂತೆ ವರ್ತಿಸಿದ್ದಲ್ಲದೆ ಮನುಷ್ಯತ್ವವನ್ನೇ ಕಳೆದುಕೊಂಡು ಹಲ್ಲೆ ಮಾಡಿದ್ದಾರೆ. ಆತ ಪೊಲೀಸ್ ಇಲಾಖೆಗೆ ಸರಿಯಾದ ವ್ಯಕ್ತಿ ಹೌದೋ, ಅಲ್ಲವೋ ಎಂಬ ಬಗ್ಗೆ ಸರ್ಕಾರ ಖಂಡಿತ ಮಾಡುತ್ತೆ ಎಂದು ಹೇಳಿದ್ದಾರೆ.
ಪೊಲೀಸರಿಂದ ಹಲ್ಲೆಗೊಳಗಾದ ಕೊರಗರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಗೃಹ ಸಚಿವರು ಬಳಿಕ ಮಾತನಾಡಿದ ಈ ಘಟನೆ ಬಗ್ಗೆ ಯಾರೂ ಹೆದರಬೇಕಾದ ಅವಶ್ಯಕತೆ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಿಎಸ್ಐ ಅಮಾನತು ಮಾಡಲಾಗಿದೆ. ಉಳಿದವರ ವರ್ಗಾವಣೆ ಮಾಡಲಾಗಿದ್ದು, ಮುಂದೆ ತನಿಖೆಯಲ್ಲಿ ಅವರ ಮೇಲೂ ಕ್ರಮ ಆಗಲಿದೆ. ಹಾಗೆಯೇ ಪೊಲೀಸ್ ಇಲಾಖೆ ದಾಖಲಿಸಿದ ಮೊಕದ್ದಮೆಯ ಬಗ್ಗೆ ಮೇಲ್ನೋಟಕ್ಕೆ ಸುಳ್ಳುದಾವೆ ಎನ್ನುವುದು ಕಂಡು ಬರುತ್ತಿದೆ. ಈ ಬಗ್ಗೆ ಕೂಡಾ ಯಾರೂ ಹೆದರುವ ಅವಶ್ಯಕತೆ ಇಲ್ಲ. ಸರ್ಕಾರವೇ ನಿಮ್ಮ ಜೊತೆಗಿದೆ ಎಂದರು.
ಇನ್ನು ಘಟನೆ ನಡೆದ 2 ದಿನಗಳ ಬಳಿಕ ದೂರು ಕೊಟ್ಟ ಪೊಲೀಸ್ ಸಿಬ್ಬಂದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಗೃಹ ಸಚಿವರು ಎರಡು ದಿನ ಸುಮ್ಮನಿದ್ದ ಪೊಲೀಸ್ ಕಾನ್ಸ್ಟೇಬಲ್ ಮೂರನೇ ದಿನ ಕೇಸು ಮಾಡಿದ್ದಾನೆ, ಸರ್ಕಾರಿ ನೌಕರಿಗೆ ಅಡ್ಡಿ ಎಂದು ಪ್ರತಿ ದೂರು ನೀಡಿದ್ದಾನೆ. ಎಲ್ಲರಿಗೂ ಗೊತ್ತಾಗುತ್ತೆ ಇದೊಂದು ಸುಳ್ಳು ಕೇಸ್, ಈ ರೀತಿ ಒಬ್ಬ ಪೋಲೀಸ್ ಸುಳ್ಳು ಕೇಸು ಕೊಡಬಾರದು. ಇದು ಬಹಳ ದೊಡ್ಡ ಅಪರಾಧ, ಸಾಮಾನ್ಯ ಜನ ಇದನ್ನೆಲ್ಲ ಮಾಡ್ತಾರೆ ನಿಜ. ಆದರೆ ನಮ್ಮ ಒಬ್ಬ ಪೊಲೀಸ್ ಈ ಕೆಲಸ ಮಾಡಬಾರದಿತ್ತು ಎಂದರು.
ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸ್ ನೇಮಕ ಮಾಡುತ್ತೇವೆ, ಪೊಲೀಸರೇ ರೌಡಿ ಕೆಲಸ ಮಾಡಿದರೆ ತಡೆಯೋರು ಯಾರು?. ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದಾನೆ. 1 ಲಕ್ಷ ಪೊಲೀಸ್ ಸಿಬ್ಬಂದಿ ಇದ್ದಾರೆ. ಇಂಥ ಅಧಿಕಾರಿಗಳು ಪೊಲೀಸ್ ಇಲಾಖೆಗೆ ಅವಮಾನ ಮಾಡುತ್ತಾರೆ. ನಮ್ಮಲ್ಲಿ ಒಳ್ಳೊಳ್ಳೆ ಪೊಲೀಸ್ ಅಧಿಕಾರಿಗಳು ಇದ್ದಾರೆ. ನಮ್ಮಲ್ಲಿ ಕೆಟ್ಟವರಿಲ್ಲ ಅಂತ ನಾನು ಸಮರ್ಥನೆ ಮಾಡಿಕೊಳ್ಳಲು ಹೋಗೋದಿಲ್ಲ. ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕು ಕೊಡುತ್ತೇವೆ ಎಂದರು.







