Ad Widget

ಮರೆಯಲಾಗದ ಮಹಾಪತನ : ಮಂಗಳೂರು ‌ವಿಮಾನ ದುರಂತದ ಕಹಿನೆನಪು

ಬೆಳಿಗ್ಗೆ 5.30 ರ ಸಮಯ ಇರಬಹುದು. ವಿಮಾನದ ಪೈಲಟ್‌ ಇನ್ನು ಅರ್ಧ ಗಂಟೆಯಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ ಎಂದು ಘೋಷಣೆ ಮಾಡಿದರು. ಇನ್ನೇನು ತವರು ನೆಲ ಬಂದೇ ಬಿಟ್ಟಿತು ಎನ್ನುವ ಸಂತಸದಲ್ಲಿದ್ದ ವಿಮಾನ ಪ್ರಯಾಣಿಕರ ಜೀವನದಲ್ಲಿ ಬಹುದೊಡ್ಡ ದುರಂತ ನಡೆದೇ ಹೋಯಿತು.

Ad Widget . Ad Widget . Ad Widget . Ad Widget . Ad Widget . Ad Widget

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಮೇ 22 (ಇಂದು)ರಂದು 11 ವರ್ಷ ಪೂರ್ಣವಾಗುತ್ತಿದೆ. ದೇಶದ ನಾಗರಿಕ ವಿಮಾನಯಾನದ ಇತಿಹಾಸದಲ್ಲಿ ಇದು ಎಂದೆಂದೂ ಮರೆಯಲಾಗದ ಮಹಾದುರಂತ ಎನಿಸಿದೆ. ಅಪಾರ ಸಾವುನೋವುಗಳ ನಡುವೆ ನಡೆದ ಈ ದುರ್ಘಟನೆ ಇಂದಿಗೂ ‌ಮರೆಯಲಾರದ ಕಹಿಘಟನೆ.

Ad Widget . Ad Widget .

2010ರ ಮೇ 22ರ ಮುಂಜಾನೆ ಸಂಭವಿಸಿದ ಈ ಮಹಾದುರಂತದಲ್ಲಿ ಪೈಲಟ್‌, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಮಾತ್ರ ಬದುಕುಳಿದಿದ್ದರು.

ಮೇ 22ರ ಮುಂಜಾನೆ ದುಬೈನಿಂದ ಮಂಗಳೂರಿಗೆ ಬಂದ ವಿಮಾನ ಎಲ್ಲ ಸುರಕ್ಷತಾ ಕ್ರಮ ಹಾಗೂ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು.
ಆದರೆ ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನವು ನಿಲ್ಲದೇ ನೇರವಾಗಿ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘ‌ಟನೆಗೆ ಕಾರಣ ಎಂದು ಅನಂತರ ನಡೆದ ತನಿಖೆಯಲ್ಲಿ ತಿಳಿದುಬಂದಿತ್ತು. ಬಹುತೇಕ ಶವಗಳು ಸುಟ್ಟುಕರಕಲಾಗಿದ್ದ ಕಾರಣ ಗುರುತು ಪತ್ತೆ ಅಸಾಧ್ಯವಾಗಿತ್ತು.
ದುರಂತ ಸಂಭವಿಸಿದ ಸ್ಥಳದಲ್ಲೇ ಮೃತರ ಹೆಸರುಗಳನ್ನು ಶಿಲೆಗಳಲ್ಲಿ ಬರೆದು ತಾತ್ಕಾಲಿಕ ಸ್ಮಾರಕ ನಿರ್ಮಿಸಲಾಗಿತ್ತು. ಆದರೆ ಆ ಜಾಗ ಖಾಸಗಿ ವ್ಯಕ್ತಿಗೆ ಸೇರಿದ್ದರಿಂದ ವಿವಾದ ಉಂಟಾಗಿತ್ತು ಹಾಗೂ ತಾತ್ಕಾಲಿಕ ಸ್ಮಾರಕವು ಕಿಡಿಗೇಡಿಗಳಿಂದಾಗಿ ಪುಡಿಯಾಗಿತ್ತು. ಅಂತಿಮವಾಗಿ 3 ವರ್ಷಗಳ ಹಿಂದೆ ಕೂಳೂರು ಸಮೀಪದ ತಣ್ಣೀರುಬಾವಿಗೆ ತೆರಳುವ ರಸ್ತೆ ಪಕ್ಕದ 90 ಸೆಂಟ್ಸ್‌ ಜಾಗದಲ್ಲಿ 22/5 ಹೆಸರಿನಲ್ಲಿ “ಸ್ಮಾರಕ ಪಾರ್ಕ್‌’ ನಿರ್ಮಿಸಲಾಗಿದೆ. ಅಲ್ಲಿ ಪ್ರತೀ ವರ್ಷ ಮೇ 22ರಂದು ಇಲ್ಲಿ ದುರಂತದಲ್ಲಿ ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ.

‘ಬ್ಯೂಟಿಫುಲ್ ಏರ್‌ಪೋರ್ಟ್, ಬಟ್ ಡೇಂಜರಸ್’

ಸ್ವತಃ ಪೈಲಟ್‌ ಆಗಿದ್ದ ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ಕೂಡ ಇದು ಅಪಾಯಕಾರಿ ವಿಮಾನ ನಿಲ್ದಾಣ ಎಂದಿದ್ದರು. ‘ಬ್ಯೂಟಿಫುಲ್ ಏರ್‌ಪೋರ್ಟ್, ಬಟ್ ಡೇಂಜರಸ್’ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ರಾಜೀವ್‌ ಗಾಂಧಿ ಹೀಗೆ ವ್ಯಾಖ್ಯಾನಿಸಿದ್ದರು. ದುರಂತ ಸಂಭವಿಸುವ 25 ವರ್ಷಗಳ ಹಿಂದೆಯೇ ಇಂತಹ ಎಚ್ಚರಿಕೆಯ ನೀಡಿದ್ದರು. ನಿಜಕ್ಕೂ ಇದೊಂದು ದೇಶದ ಸುಂದರ ಏರ್‌ಪೋರ್ಟ್. ಆದರೆ ಪೈಲಟ್ ಮೈಮರೆತನೆಂದರೆ ಪ್ರಪಾತವೇ ಗತಿ. ವೆರಿ ಡೇಂಜರಸ್ ಎಂದು ಅವರು ಹೇಳಿದ್ದರು.

ಎರಡು ತಿಂಗಳ ಹಿಂದೆ ರದ್ದಾದ ದೂರು, ವಿಚಾರಣೆ! :

ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್‌ ಇಂಡಿಯಾ ಹಾಗೂ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದ್ದ ಖಾಸಗಿ ದೂರು ಮತ್ತು ವಿಚಾರಣೆಯನ್ನು ಹೈಕೋರ್ಟ್‌ ಎರಡು ತಿಂಗಳುಗಳ ಹಿಂದೆಯಷ್ಟೇ ರದ್ದುಪಡಿಸಿತ್ತು. ವಿಮಾನ ದುರಂತ ಕುರಿತಂತೆ 2012ರ ಮಾ. 6ರಂದು ಮಂಗಳೂರು ಮೂಲದ “812 ಫೌಂಡೇಶನ್‌’ ಖಾಸಗಿ ದೂರು ದಾಖಲಿಸಿತ್ತು. ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ಮಾನದಂಡಗಳ ಅನುಸಾರ ಮಂಗಳೂರು ವಿಮಾನ ನಿಲ್ದಾಣ ಕಾರ್ಯನಿರ್ವಹಣೆಗೆ ಯೋಗ್ಯವಾಗಿರಲಿಲ್ಲ. ಆದರೂ ವೈಮಾನಿಕ ಚಟುವಟಿಕೆ ನಡೆಯುತ್ತಿತ್ತು. ಏರ್‌ ಇಂಡಿಯಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿರ್ದೇಶಕರ ಸಂಪೂರ್ಣ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಅತೀ ದೊಡ್ಡ ಪರಿಹಾರ:

ಈ ಮಹಾ ದುರಂತದಲ್ಲಿ 166 ಪ್ರಯಾಣಿಕರ ಪೈಕಿ 158 ಮಂದಿ ಮೃತಪಟ್ಟಿದ್ದರು. ಇದೀಗ ದುರಂತದಲ್ಲಿ ಮಡಿದ 45 ವರ್ಷದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ನೀಡಲಾಗುವ ಧನ ಸಹಾಯವನ್ನು ಹೆಚ್ಚಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ. ಇದು ಮಂಗಳೂರು ವಿಮಾನ ದುರಂತದಲ್ಲಿ ಮೃತರ ಕುಟುಂಬಕ್ಕೆ ಸಿಗುತ್ತಿರುವ ಅತಿ ದೊಡ್ಡ ಪರಿಹಾರ ಮೊತ್ತವಾಗಿದೆ.

ಮೃತನ ಕುಟುಂಬಸ್ಥರಿಗೆ 7.6 ಕೋಟಿ ರೂ. ಪರಿಹಾರ

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ದುರಂತದಲ್ಲಿರುವ ಮಡಿದಿರುವ ಮಹೇಂದ್ರ ಕೊಡ್ಕಣಿ ಅವರ ಪತ್ನಿ, ಪುತ್ರಿ ಹಾಗೂ ಪುತ್ರ 7.64 ಕೋಟಿ ರೂ. ಹಾಗೂ ವರ್ಷಕ್ಕೆ ಶೇಕಡಾ 9ರಷ್ಟು ಬಡ್ಡಿದರಲ್ಲಿ ಪರಿಹಾರ ಧನವನ್ನು ಕಳೆದ ವರ್ಷ ಪಡೆದುಕೊಂಡಿದ್ದಾರೆ.

ಮಹೇಂದ್ರ ಕೊಡ್ಕಣಿ ಯುಎಇ ಮೂಲದ ಸಂಸ್ಥೆಯ ಮಧ್ಯ ಪ್ರಾಚ್ಯದ ಪ್ರಾದೇಶಿಕ ನಿರ್ದೇಶಕರಾಗಿದ್ದರು. ರಾಷ್ಟ್ರೀಯ ಗ್ರಾಹಕ ಬಿಕ್ಕಟ್ಟುಗಳ ನಿವಾರಣಾ ಆಯೋಗದ (ಎನ್‌ಸಿಡಿಆರ್‌ಸಿ) ಪೀಠದಲ್ಲಿ ಪ್ರಕರಣ ನಡೆದಿತ್ತು. ಬಳಿಕ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ
ಮಂಗಳೂರು ವಿಮಾನ ದುರಂತದಲ್ಲಿ ಬಲಿಯಾದ ಯಾವುದೇ ಕುಟುಂಬಕ್ಕೆ ದೊರಕುತ್ತಿರುವ ಅತಿ ದೊಡ್ಡ ಪರಿಹಾರ ಮೊತ್ತ ಇದಾಗಿದೆ. ಈ ನಡುವೆ ದುರಂತದಲ್ಲಿ ಮಡಿದ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ.

Leave a Comment

Your email address will not be published. Required fields are marked *