ತಂದೆ ಹಾರಿಸಿದ ಗುಂಡು ಮಗನ ಪ್ರಾಣವನ್ನೇ ಬಲಿ ತೆಗೆದುಕೊಳ್ತು! ಕೋಪದ ಕೈಗೆ ಬುದ್ದಿ ಕೊಟ್ರೆ ಹೀಗೆ ಆಗೋದಲ್ವೇ?

ಮಂಗಳೂರು: ಸಂಬಳದ ವಿಚಾರದಲ್ಲಿ ನೌಕರರ ಜೊತೆ ಜಟಾಪಟಿಗಿಳಿದು ಫೈರಿಂಗ್ ಮಾಡಿದ್ದ ಪ್ರಕರಣದಲ್ಲಿ ತಲೆಗೆ ಗುಂಡೇಟು ಬಿದ್ದಿರುವ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲೀಕರ ಪುತ್ರನ ಮೆದುಳು ನಿಷ್ಕ್ರಿಯಗೊಂಡಿದ್ದು, ಮನೆಮಂದಿ ಆತನ ಅಂಗಾಂಗ ದಾನಕ್ಕೆ ಚಿಂತನೆ ನಡಸಿದ್ದಾರೆ. ವಿಷಯ ತಿಳಿದ ತಂದೆಗೆ ಹೃದಯಾಘಾತ ಸಂಭವಿಸಿದ್ದು, ಜುಜುಬಿ ಹಣಕ್ಕಾಗಿ ಕೋಪದ ಕೈಗೆ ಬುದ್ದಿ ಕೊಟ್ಟು ಮೂಗು ಕೊಯ್ದ ಪರಿಸ್ಥಿತಿ ನಿರ್ಮಾಣವಾಗಿದೆ.

Ad Widget ... ..

ಘಟನೆ ವಿವರ:
ವೈಷ್ಣವಿ ಕಾರ್ಗೋ ಸಂಸ್ಥೆಯ ಲಾರಿಗಳು ದೇಶಾದ್ಯಂತ ಸಂಚರಿಸುತ್ತವೆ. ಒಂದು ಲಾರಿಯಲ್ಲಿ ಡ್ರೈವರ್ ಮತ್ತು ಕ್ಲೀನರ್ ಆಗಿದ್ದ ಚಂದ್ರು ಮತ್ತು ಅಶ್ರಫ್ ಒಂದು ಟ್ರಿಪ್ ಮುಗಿಸಿ ಬಂದಿದ್ದರು. ಎರಡು ದಿನಗಳಿಂದ ತಮ್ಮ ಭತ್ಯೆ ಸೇರಿ ಸಂಬಳ ನಾಲ್ಕು ಸಾವಿರ ಹಣ ನೀಡುವಂತೆ ಕೇಳಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ ಇಬ್ಬರು ಕೂಡ, ಕಚೇರಿಗೆ ಬಂದು ರಂಪ ಮಾಡಿದ್ದಾರೆ. ಆದರೆ, ಕಚೇರಿಯಲ್ಲಿ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಅವರ ಪತ್ನಿ ಶಾಂತಲಾ ಪ್ರಭು ಮತ್ತು ಇತರ ಸಿಬಂದಿ ಇದ್ದರು. ಪತ್ನಿಯೇ ಕಚೇರಿ ವಹಿವಾಟು ನೋಡಿಕೊಳ್ಳುತ್ತಿದ್ದುದರಿಂದ ಇಬ್ಬರು ನೌಕರರು ಅವರ ಬಳಿ ಸಂಬಳ ಕೇಳಿದ್ದಾರೆ. ಬಳಿಕ ಕಿರಿಕಿರಿ ತಾಳಲಾರದೆ ಪತಿ ರಾಜೇಶ್ ಪ್ರಭು ಅವರನ್ನು ಬರಹೇಳಿದ್ದಾರೆ.

Ad Widget

ಕಚೇರಿಯ ಬಳಿಯಲ್ಲೇ ಇವರ ಮನೆ ಇರುವುದರಿಂದ ರಾಜೇಶ್ ಪ್ರಭು ತನ್ನ ಮಗ ಸುಧೀಂದ್ರನ ಜೊತೆ ಕಾರಿನಲ್ಲಿ ಆಗಮಿಸಿದ್ದರು. ಕಚೇರಿಗೆ ಬಂದು ನೌಕರರ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ, ಸುಧೀಂದ್ರನೂ ನಡುವೆ ಬಾಯಿ ಹಾಕಿದ್ದು, ಮಾತುಕತೆಯ ವೇಳೆ ಡ್ರೈವರ್ ಚಂದ್ರು ಮತ್ತು ಕ್ಲೀನರ್ ಮೇಲೆ ಕೈಯಿಂದ ಹೊಡೆದಿದ್ದಾನೆ. ಎರಡು, ಮೂರು ಬಾರಿ ಕೈಯಿಂದ ಹೊಡೆದಿದ್ದಾನೆ ಎನ್ನಲಾಗುತ್ತಿದ್ದು, 16 ವರ್ಷದ ಹುಡುಗ ತಮ್ಮ ಮೇಲೆ ಕೈಮಾಡಿದ್ದರಿಂದ ಸಿಟ್ಟುಗೊಂಡ ಚಾಲಕ ಮತ್ತು ಕ್ಲೀನರ್ ಮೇಲೆ ಹುಡುಗನ ಮೇಲೆರಗಿದ್ದಾರೆ.

ಇಷ್ಟಾಗುತ್ತಿದ್ದಂತೆ, ಸಿಟ್ಟುಗೊಂಡ ಮಾಲೀಕ ತನ್ನ ಪಾಯಿಂಟ್ 32 ಪಿಸ್ತೂಲ್ ಹೊರತೆಗೆದು ಕೆಲಸದಾಳುವನ್ನು ಬೆದರಿಸಿದ್ದಾರೆ. ಮಗನನ್ನು ಬಿಟ್ಟು ಬಿಡುವಂತೆ ಹೇಳಿದರೂ, ಕೇಳದ್ದರಿಂದ ರಾಜೇಶ್ ಪ್ರಭು ಟ್ರಿಗ್ಗರ್ ಒತ್ತಿದ್ದಾರೆ. ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿದ್ದು ಒಂದು ಬುಲೆಟ್ ಮಗನ ಕೆನ್ನೆಯ ಭಾಗದಿಂದ ತಲೆಯನ್ನು ಹೊಕ್ಕಿದೆ. ಇನ್ನೊಂದು ಬುಲೆಟ್ ಮಿಸ್ ಆಗಿತ್ತು. ಕೆಲಸದಾಳು ಮೇಲಿನ ಸಿಟ್ಟಿನಲ್ಲಿ ಹಾರಿಸಿದ ಗುಂಡು ಮಗನ ಕೆನ್ನೆ ಸೀಳಿ ಹಾಕಿತ್ತು. ಕೂಡಲೇ ಆತನನ್ನು ಯೂನಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಚೇರಿಯ ಹೊರಭಾಗದಲ್ಲಿ ಇವರು ನಿಲ್ಲಿಸಿದ್ದ ಇನ್ನೋವಾ ಕಾರಿನ ಬಳಿ ಘಟನೆ ನಡೆದಿದ್ದು ಕಚೇರಿ ಒಳಗಿದ್ದ ಸಿಬಂದಿಗಳು ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಘಟನೆ ಆಗಿಹೋಗಿತ್ತು. ಮಗನ ಮೇಲೆ ಗುಂಡೇಟು ಬೀಳುತ್ತಲೇ ಚಾಲಕ ಮತ್ತು ಕ್ಲೀನರ್ ಅಲ್ಲಿ ಓಡಿ ತಪ್ಪಿಸಿಕೊಂಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸ್ ಕಮಿಷನರ್ ಶಶಿಕುಮಾರ್, ತಲೆಯ ಭಾಗದಿಂದ ಐದು ಇಂಚು ಗುಂಡು ಒಳಹೊಕ್ಕಿದೆ ಎಂದಿದ್ದರು. ತಲೆಯ ಭಾಗಕ್ಕೆ ಹೊಕ್ಕಿದ ಗುಂಡಿನಿಂದಾಗಿ ಬಾಲಕನ ಸ್ಥಿತಿ ಸೀರಿಯಸ್ ಆಗಿದೆ ಎಂದು ವೈದ್ಯರ ಮೂಲದಿಂದ ತಿಳಿದುಬಂದಿದೆ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ರಾಜೇಶ್ ಪ್ರಭು ತನಗೆ ಜೀವ ಬೆದರಿಕೆ ಹೊಂದಿದ್ದ ಹಿನ್ನೆಲೆಯಲ್ಲಿ ಲೈಸನ್ಸ್ ಹೊಂದಿರುವ ಪಿಸ್ತೂಲ್ ಪಡೆದಿದ್ದರು. 2022, ಜುಲೈ ವರೆಗೆ ಪಿಸ್ತೂಲ್ ಲೈಸನ್ಸ್ ಇದೆ. ರಾಜೇಶ್ ಪ್ರಭು- ಶಾಂತಲಾ ಪ್ರಭು ದಂಪತಿ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನನ್ನು ಹೊಂದಿದ್ದರು.

ಘಟನೆಯ ಚಿತ್ರಣ ವೈಷ್ಣವಿ ಸಂಸ್ಥೆಯ ಕಚೇರಿಯಲ್ಲೇ ಇರುವ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಒಳಗೆ ಬಂದು ಹೋಗಿರುವುದು, ಆನಂತರ ಹೊರಗಡೆ ಕಾರಿನ ಬಳಿ ನೌಕರರು ಜಗಳ ಮಾಡುತ್ತಿರುವುದು ರೆಕಾರ್ಡ್ ಆಗಿತ್ತು. ನೌಕರರ ಮೇಲಿನ ಸಿಟ್ಟು, ಜುಜುಬಿ ನಾಲ್ಕು ಸಾವಿರ ದುಡ್ಡಿನ ವಿಚಾರ ಆಗರ್ಭ ಶ್ರೀಮಂತ ರಾಜೇಶ್ ಪ್ರಭುವಿಗೆ ನಿಂತ ಧರೆಯೇ ಕುಸಿಯುವಂತಾಗಿದೆ. ವೈಷ್ಣವಿ ಕಾರ್ಗೋ ಸಂಸ್ಥೆಯು ಮಂಗಳೂರು, ಬೆಂಗಳೂರು ಸೇರಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ನಲ್ಲಿ ಕಚೇರಿ ಹೊಂದಿದ್ದು ನೂರಾರು ಕಾರ್ಗೋ ವಾಹನಗಳನ್ನು ಹೊಂದಿದ್ದು ಕೋಟ್ಯಂತರ ರೂಪಾಯಿ ಟ್ರಾನ್ಸ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದವು.

Leave a Comment

Your email address will not be published. Required fields are marked *