ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ದಸರಾ ಜಂಬೂಸವಾರಿಯ ಪ್ರಮುಖ ಆನೆಗಳ ಆಯ್ಕೆ ಕುರಿತು ಕುತೂಹಲ ಮೂಡಿದ್ದು, ಪಟ್ಟದ ಆನೆಯಾಗಿ ಶ್ರೀಕಂಠ ಹಾಗೂ ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಈ ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು ದಸರಾ ಮಹೋತ್ಸವ 2026ಕ್ಕೆ ಗಜಪಡೆ ಸಜ್ಜಾಗುತ್ತಿದ್ದು, ಈ ಬಾರಿ ಪಟ್ಟದ ಆನೆಯ ಜವಾಬ್ದಾರಿಯನ್ನು ಶ್ರೀಕಂಠ ಮತ್ತೊಮ್ಮೆ ವಹಿಸಿಕೊಳ್ಳಲಿದ್ದಾನೆ. ನಿಶಾನೆ ಆನೆಯಾಗಿ ಏಕಲವ್ಯ ಆಯ್ಕೆಯಾಗಿದ್ದು, ಕಳೆದ ಬಾರಿಯೂ ಪಟ್ಟದ ಆನೆಯಾಗಿ ಶ್ರೀಕಂಠನೇ ಅಂಬಾರಿ ಹೊತ್ತು ಗಮನ ಸೆಳೆದಿದ್ದನು.
ದಸರಾ ಮಹೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸುವ ಗಜಪಡೆಯ ಆನೆಗಳ ಆರೋಗ್ಯ, ಸಾಮರ್ಥ್ಯ, ಅನುಭವ ಹಾಗೂ ತಾಲೀಮು ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಜವಾಬ್ದಾರಿಗಳನ್ನು ನಿಗದಿಪಡಿಸಲಾಗುತ್ತಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರ ಮತ್ತು ತಾಲೀಮಿನ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಎಲ್ಲಾ ಆನೆಗಳ ಆರೋಗ್ಯದ ಮೇಲೂ ವಿಶೇಷ ನಿಗಾ ವಹಿಸಲಾಗುತ್ತಿದೆ. ಅಂತಿಮ ಹಂತದ ತಾಲೀಮು ಪೂರ್ಣಗೊಂಡ ಬಳಿಕ ಅಂಬಾರಿ ಹೊರುವ ಆನೆಯ ಆಯ್ಕೆ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಅಂತಿಮಗೊಳಿಸಲಾಗುತ್ತದೆ.
ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಶ್ರೀಕಂಠ ಹಾಗೂ ಏಕಲವ್ಯ ಪ್ರಮುಖ ಆನೆಗಳಾಗಿ ಕಾಣಿಸಿಕೊಳ್ಳಲಿರುವುದು ಗಜಪ್ರಿಯರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.


















