ಸಮಗ್ರ ನ್ಯೂಸ್: “ನಾನು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನೀಡಿದ್ದ 1.11 ಲಕ್ಷ ರೂಪಾಯಿ ದೇಣಿಗೆ ಹಣವನ್ನು ನನಗೆ ತಕ್ಷಣ ವಾಪಸ್ ನೀಡಿ. ಇಲ್ಲದಿದ್ದರೆ ನಾನು ನ್ಯಾಯಾಲಯದ ಮೆಟ್ಟಿಲೇರುತ್ತೇನೆ,” ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ರಾಮಮಂದಿರ ದೇಣಿಗೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ಅಯೋಧ್ಯೆಯಲ್ಲೇ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ತಮ್ಮ ದೇಣಿಗೆ ಹಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ದಿಗ್ವಿಜಯ್ ಸಿಂಗ್, ನಾನು ರಾಮಮಂದಿರಕ್ಕೆ ನೀಡಿದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡು ಲೂಟಿ ಮಾಡಲಾಗಿದೆ. ಆದ್ದರಿಂದ ಆ ಹಣವನ್ನು ನನಗೆ ಹಿಂತಿರುಗಿಸಬೇಕು, ಅದನ್ನು ನಾನು ಬೇರೆ ಅಧಿಕೃತ ರಾಮಾಲಯ ಟ್ರಸ್ಟ್ನಲ್ಲಿ ಠೇವಣಿ ಇಡುತ್ತೇನೆ. ಸದ್ಯ ಪೊಲೀಸರು ಬಿಜೆಪಿ ನಿಯಂತ್ರಣದಲ್ಲಿ ಇರುವುದರಿಂದ ನನಗೆ ಪೊಲೀಸ್ ಠಾಣೆಯ ಮೇಲೆ ನಂಬಿಕೆ ಇಲ್ಲ. ಹಾಗಾಗಿ ನಾನು ನೇರವಾಗಿ ನ್ಯಾಯಾಲಯಕ್ಕೆ ಹೋಗಿ ಕಾನೂನು ಹೋರಾಟ ನಡೆಸುತ್ತೇನೆ, ಎಂದಿದ್ದಾರೆ. ಅಲ್ಲದೆ, ತಾವು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ಗಿಂತಲೂ ಹೆಚ್ಚಿನ ದೇಣಿಗೆ ನೀಡಿದ್ದಾಗಿ ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.
ತಮ್ಮ ಭಕ್ತಿ ಹಾಗೂ ದೇಣಿಗೆಯ ಇತಿಹಾಸವನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ, ನಮಗೆ ಭಗವಾನ್ ಶ್ರೀರಾಮ ಮತ್ತು ರಾಮಮಂದಿರದ ಮೇಲೆ ಅಪಾರ ನಂಬಿಕೆಯಿದೆ. ಮಂದಿರಕ್ಕಾಗಿ ಎರಡು ಬಾರಿ ನಿಧಿ ಸಂಗ್ರಹ ಅಭಿಯಾನಗಳು ನಡೆದಿದ್ದವು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆ ನಡೆದ ಸಂದರ್ಭದಲ್ಲೇ ನಾನು ಮೊದಲ ಬಾರಿಗೆ ದೇಣಿಗೆ ನೀಡಿದ್ದೆ. ಆದರೆ ಅಂದು ಸಂಗ್ರಹಿಸಿದ ಕೋಟ್ಯಂತರ ರೂಪಾಯಿ ದೇಣಿಗೆಗೆ ಎಂದಿಗೂ ಲೆಕ್ಕವೇ ಸಿಗಲಿಲ್ಲ, ಎಂದು ಆರೋಪಿಸಿದರು.ಸುಪ್ರೀಂ ಕೋರ್ಟ್ ತೀರ್ಪಿನ ನಂತರ ವಿಶ್ವ ಹಿಂದೂ ಪರಿಷತ್ ಮತ್ತೊಮ್ಮೆ ಅಭಿಯಾನ ಆರಂಭಿಸಿತು. ಆದರೆ ನನಗೆ ಅವರ ಮೇಲೆ ನಂಬಿಕೆ ಇಲ್ಲದ ಕಾರಣ ನಾನು ಅವರಿಗೆ ನೇರವಾಗಿ ದೇಣಿಗೆ ನೀಡಲಿಲ್ಲ, ಎಂದು ಸ್ಪಷ್ಟಪಡಿಸಿದರು.








