ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮುಂಗಾರು ಮಳೆ ನಾಪತ್ತೆಯಾಗಿದ್ದು, ತೀವ್ರ ಆತಂಕ ತಂದಿದೆ. ಜೂನ್ ಮಧ್ಯಭಾಗದಲ್ಲಿ ಅಬ್ಬರಿಸಿ ಬೀಳಬೇಕಿದ್ದ ಮಾನ್ಸೂನ್ ಮಳೆ ಇನ್ನೂ ಚದುರಿದ ರೀತಿಯಲ್ಲೇ ಇದೆ. ರಾಜ್ಯಾದ್ಯಂತ ವ್ಯಾಪಿಸಿಲ್ಲ. ಬೇರೆ ಜಿಲ್ಲೆಗಳಲ್ಲಿ ಅಲ್ಲದೆ ಇದ್ದರೂ, ಕರಾವಳಿ ಭಾಗದಲ್ಲಾದರೂ ಜಾಸ್ತಿ ಮಳೆಯಾಗುತ್ತಿತ್ತು. ಆದರೆ ಕರಾವಳಿ ಕರ್ನಾಟಕದಲ್ಲಿಯೂ ಮುಂಗಾರು ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಕೂಡ ಮಳೆಯ ಪ್ರಮಾಣ ಜಾಸ್ತಿ ಇಲ್ಲ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಗಳಲ್ಲಿ ಹಗುರದಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಬಹುದು. ಇನ್ನು ಉಡುಪಿ ಮತ್ತು ಉತ್ತರ ಕನ್ನಡದ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ದಟ್ಟವಾಗಿದೆ. ಹಾಗೇ, ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗಲಿದೆ.
ವಿಜಯಪುರ, ಕಲಬುರ್ಗಿ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬೀದರ್, ಬಾಗಲಕೋಟೆ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿ ಬೀಸುತ್ತದೆ ಹೊರತು ಮಳೆಯಾಗುವುದಿಲ್ಲ ಎಂದು IMD ಸೂಚನೆ ನೀಡಿದೆ. ಹಾಗೇ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ, ಬಳ್ಳಾರಿ, ಶಿವಮೊಗ್ಗ, ಮೈಸೂರು, ದಾವಣಗೆರೆ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗಾಳಿಯ ಪ್ರಮಾಣ ಜಾಸ್ತಿಯಾಗಲಿದೆ.
ಕರ್ನಾಟಕಕ್ಕೆ ಜೂ.4ಕ್ಕೆ ಕಾಲಿಟ್ಟಿರುವ ನೈಋತ್ಯ ಮಾನ್ಸೂನ್ ತನ್ನ ಚಲನೆಯನ್ನ ಮುಂದುವರಿಸಿದ್ದರೂ, ಮಳೆಯನ್ನ ತರುತ್ತಿಲ್ಲ. ಜೂ.25ರವರೆಗೂ ವಾತಾವರಣದಲ್ಲಿ ಯಾವುದೇ ದೊಡ್ಡ ಬದಲಾವಣೆಗಳೂ ಇಲ್ಲ. ಹೀಗೆ ರಾಜ್ಯಾದ್ಯಂತ ಕೆಲವೇ ಭಾಗಗಳಲ್ಲಿ ಮಾತ್ರ ಮಳೆ ಮುಂದುವರಿಯಲಿದೆ. ಇಲ್ಲೆಲ್ಲೂ ಭಾರಿ ಮಳೆಯ ಮುನ್ಸೂಚನೆಯಾಗಲೀ, ರೆಡ್ ಅಲರ್ಟ್ ಆಗಲೀ ಇಲ್ಲವೇ ಇಲ್ಲ. ಇನ್ನು ನೈಋತ್ಯ ಮಾನ್ಸೂನ್ ಮುಂದಿನ 4-5 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ತೆಲಂಗಾಣ, ಒಡಿಶಾ, ಜಾರ್ಖಂಡ ಮತ್ತು ಬಿಹಾರ, ಛತ್ತೀಸ್ಗಢದ ಕೆಲವು ಭಾಗಗಳಲ್ಲಿ ಮುನ್ನಡೆಯಲಿದೆ. ಆದರೆ ಭಾರೀ ಮಳೆಯ ಲಕ್ಷಣಗಳು ಕಾಣುತ್ತಿಲ್ಲ.








