ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಕಿಡಿಗೇಡಿಗಳು ಮತ್ತೊಮ್ಮೆ ವಿಕೃತಿ ಮೆರೆದಿದ್ದಾರೆ. ಇಂದು (ಜೂ. 12) ದೊಡ್ಡಣ್ಣ ನಿಧನರಾಗಿದ್ದಾರೆಂಬ ಸುಳ್ಳು ಸುದ್ದಿ ವೈರಲ್ ಆಗಿತ್ತು. ʻದೊಡ್ಡಣ್ಣ ಇನ್ನಿಲ್ಲʼ ಎಂಬ ಶೀರ್ಷಿಕೆಯೊಂದಿಗೆ ಭಾವಪೂರ್ಣ ಶ್ರದ್ದಾಂಜಲಿಯ ಪೋಸ್ಟರ್ ಮತ್ತು ಫೇಸ್ಬುಕ್ ಪೋಸ್ಟ್ಗಳು ಹರಿದಾಡಿದ್ದವು.
ಇದನ್ನ ನೋಡಿ ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಹಾಗೂ ಅವರ ಆಪ್ತ ವಲಯದವರು ತೀವ್ರ ಅತಂಕ ಮತ್ತು ದಿಗಿಲಿಗೆ ಒಳಗಾಗಿದ್ದರು.
ತಮ್ಮ ಸಾವಿನ ಕುರಿತಾದ ಈ ಸುಳ್ಳು ಸುದ್ದಿ ಭಾರಿ ಪ್ರಮಾಣದಲ್ಲಿ ಹರಿದಾಡುತ್ತಿರುವುದು ಹಿರಿಯ ನಟ ದೊಡ್ಡಣ್ಣ ಅವರ ಗಮನಕ್ಕೂ ಬಂದಿದೆ. ಈ ವದಂತಿಗಳಿಗೆ ತೀವ್ರ ಬೇಸರ ಮತ್ತು ಸಿಟ್ಟು ವ್ಯಕ್ತಪಡಿಸಿರುವ ಅವರು, ವಿಡಿಯೋ ಮೂಲಕ ತಾವು ಸಂಪೂರ್ಣವಾಗಿ ಆರೋಗ್ಯವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
“ಅನ್ನದಾತರು, ಆಶ್ರಯದಾತರಾದ ಕನ್ನಡ ನಾಡಿನ ಎಲ್ಲಾ ನನ್ನ ತಂದೆ-ತಾಯಂದಿರಿಗೆ ನಿಮ್ಮ ದೊಡ್ಡಣ್ಣನ ಭಕ್ತಪೂರ್ವಕವಾದಂತಹ ನಮಸ್ಕಾರಗಳು. ನಿಮಗೆ ಒಂದು ವಿಷಯವನ್ನ ನಾನು ತಿಳಿಸಲೇಬೇಕು. ಏನು ಅಂದ್ರೆ, ಇವತ್ತು ಬೆಳ ಬೆಳಗ್ಗೆನೇ ನಾನು ಎದ್ದೇಳೋಕು ಮುಂಚೆಯೇ ಯಾರೋ ಅವಿವೇಕಿಗಳು ನಾನು ನಿಧನವಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅದು ಶುದ್ದ ಸುಳ್ಳು, ನಾನು ಆರೋಗ್ಯವಾಗಿದ್ದೇನೆ, ನೆಮ್ಮದಿಯಾಗಿದ್ದೇನೆ. ಹಾಗಾಗಿ, ಈ ವಿಷಯವನ್ನ ತಮಗೆಲ್ಲಾ ತಿಳಿಸಬೇಕು. ನನಗೆ ಬೆಳಗ್ಗೆಯಿಂದ ಎಲ್ಲರೂ ಕರೆ ಮಾಡ್ತಿದ್ರು, ಅದಕ್ಕೋಸ್ಕರ ಈ ವಿಡಿಯೋ ಮಾಡ್ತಿದ್ದೇನೆ. ನಾನು ಆರೋಗ್ಯವಾಗಿದ್ದೇನೆ. ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ಚೆನ್ನಾಗಿರುತ್ತೋ, ನಾನು ನೂರ್ಕಾಲ ಚೆನ್ನಾಗಿರ್ತೇನೆ. ನನ್ನ ಮೇಲೆ ಈ ರೀತಿ ಪ್ರೀತಿ-ವಿಶ್ವಾಸ ಇಟ್ಟಿದ್ದಕ್ಕೆ ಎಲ್ಲರಿಗೂ ವಂದನೆ. ಆ ಕಿಡಿಗೇಡಿಗಳನ್ನಂತೂ ಬಿಡಲ್ಲ, ಬೆನ್ನತ್ತಿ ಅವರಿಗೆ ಒಂದು ಪನೀಷ್ಮೆಂಟ್ ಮಾಡಿಸ್ತೇನೆ” ಎಂದಿದ್ದಾರೆ ದೊಡ್ಡಣ್ಣ.
ಫೇಸ್ಬುಕ್ನ ಪೇಜ್ವೊಂದರಲ್ಲಿ ಈ ಸುಳ್ಳು ಸುದ್ದಿಯನ್ನ ಹರಿಬಿಡಲಾಗಿತ್ತು. ಆ ಪೋಸ್ಟ್ನಲ್ಲಿ ಇಂದಿನ ದಿನಾಂಕವನ್ನ ಉಲ್ಲೇಖಿಸಿ ʻಮರಣʼ ಎಂದು ಬರೆಯಲಾಗಿತ್ತು. ಜೊತೆಗೆ ʻನಿಮ್ಮ ಅಭಿನಯ, ನಿಮ್ಮ ಸಾಧನೆ ಯಾವಾಗಲೂ ನಮ್ಮ ಜೊತೆ ಇರುತ್ತೆʼ ಎಂಬ ಒಕ್ಕಣೆಯೊಂದಿಗೆ ದೊಡ್ಡಣ್ಣ ಅವರ ಫೋಟೋ ಬಳಸಿ ಶ್ರದ್ದಾಂಜಲಿ ಕೋರಲಾಗಿತ್ತು. ಇದು ಸಂಪೂರ್ಣ ನಕಲಿ ಮತ್ತು ಎಡಿಟೆಡ್ ಪೋಸ್ಟರ್ ಆಗಿದ್ದು, ಸಾರ್ವಜನಿಕರು ಇಂತಹ ಯಾವುದೇ ಸುಳ್ಳು ಸುದ್ದಿಯನ್ನ ನಂಬಬಾರದು ಎಂದು ದೊಡ್ಡಣ್ಣ ಮನವಿ ಮಾಡಿದ್ದಾರೆ.








