ಸಮಗ್ರ ನ್ಯೂಸ್: ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಅವರನ್ನು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಂದ ದೂರ ಇಡಬೇಕು , ಇಲ್ಲದಿದ್ದರೆ ಜಾತ್ರೆ ಧ್ವಜಾರೋಹಣದ ವೇಳೆ ಕೊಡಿಮರದಡಿ ಕುಳಿತು ದೇವರಲ್ಲಿ ನ್ಯಾಯ ಕೇಳುತ್ತೇನೆ ಎಂದು ಸಂತ್ರಸ್ತೆಯ ತಾಯಿ ನಮಿತಾ ಎಚ್ಚರಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಯುವತಿಗೆ ಅನ್ಯಾಯ ಮಾಡಿದವರನ್ನು ದೇವರ ಕೆಲಸದಲ್ಲಿ ತೊಡಗಿಸಲು ಬಿಡಬಾರದು. ಏಪ್ರಿಲ್ 10 ರಂದು ನಡೆಯಲಿರುವ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಗನ್ನಿವಾಸ್ ರಾವ್ ಭಾಗವಹಿಸಬಾರದು. ಒಂದು ವೇಳೆ ಅವರನ್ನು ಸೇರಿಸಿಕೊಂಡರೆ, ನಾನು ಕೊಡಿಮರದ ಅಡಿಯಲ್ಲಿ ಕುಳಿತು ತಂತ್ರಿಗಳಲ್ಲಿ ನ್ಯಾಯ ಕೇಳುತ್ತೇನೆ,” ಎಂದು ಅವರು ಎಚ್ಚರಿಸಿದ್ದಾರೆ.
ಈ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೂ ಅವರು ಮನವಿ ಮಾಡಿದ್ದಾರೆ.ಬಿಜೆಪಿ ಮಾಜಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಮಗ ಶ್ರೀಕೃಷ್ಣ, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದ . ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ಈಗ 9 ತಿಂಗಳು ಕಳೆದಿದೆ. ಆರಂಭದಲ್ಲಿ ಮದುವೆ ಮಾಡಿಕೊಡುವುದಾಗಿ ಕಾಲಾವಕಾಶ ಕೇಳಿದ್ದ ಜಗನ್ನಿವಾಸ್ ರಾವ್, ಈಗ ಮದುವೆಗೆ ಒಪ್ಪುತ್ತಿಲ್ಲ ಎಂದು ನಮಿತಾ ಆರೋಪಿಸಿದ್ದಾರೆ.







