ಸಮಗ್ರ ನ್ಯೂಸ್: ಹಿಂದುತ್ವದ ಬಗ್ಗೆ ಭಾಷಣ ಮಾಡುವವರು ಕೋಳಿ ಅಂಕದ ವಿಚಾರದಲ್ಲಿ ಈಗ ಎಲ್ಲಿದ್ದಾರೆ. ಎಲ್ಲರೂ ಬರಬೇಕಿತ್ತಲ್ಲಾ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು. ತುಳುನಾಡ ಆಚರಣೆ, ಸಂಪ್ರದಾಯ ಉಳಿವಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆಯು ಕೊಟೆಚಾ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ದೇವಸ್ಥಾನ, ದೈವಸ್ಥಾನಗಳ ಉತ್ಸವಗಳ ಸಂದರ್ಭದಲ್ಲಿ ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಕೋಳಿ ಅಂಕ ನಡೆದು ಬಂದಿದೆ. ಆದರೆ ಹಿಂದುತ್ವದ ಬಗ್ಗೆ ಮಾತನಾಡುವವರು ಯಾರು ಬಂದಿಲ್ಲ. ಜೂಜು ರಹಿತ ಸಾಂಪ್ರದಾಯಿಕ ಕೋಳಿ ಅಂಕ ಹೋರಾಟಕ್ಕೆ ಬರುವಂತೆ ಅವಿಭಜಿತ ಜಿಲ್ಲೆಯ 13 ಮಂದಿ ಶಾಸಕರ ಬಾಗಿಲು ಬಡಿಯಿರಿ. ಕೋಳಿ ಅಂಕ ವಿಚಾರವಾಗಿ ಅಧಿವೇಶನದಲ್ಲಿ ನಾನು ಪ್ರಸ್ತಾಪಿಸುವೆ. ನನಗೆ ಯಾರ ಹೆದರಿಕೆಯೂ ಇಲ್ಲ ಎಂದು ಅವರು ಹೇಳಿದರು.
13 ಮಂದಿ ಶಾಸಕರು ಹಾಗೂ ಸಂಸದರು ಎಲ್ಲರೂ ಹೋದರೆ ಕಾನೂನನ್ನು ಬದಲಾಯಿಸುವುದು ಕಷ್ಟವೇನಲ್ಲ. ಜನಪ್ರತಿನಿಧಿಗಳು ಕಾನೂನು ತರಲು, ಕಾನೂನು ಬದಲಾವಣೆ ಮಾಡಲು ಇರುವವರು. ಭಾಷಣ ಮಾಡಿ ಜನರಿಗೆ ಧಿಕ್ಕಾರ ಹಾಕಲು ಹೇಳುವವರಲ್ಲ ಎಂದು ಅವರು ಹೇಳಿದರು.
ಕೋಳಿ ಅಂಕದ ಕುರಿತು ವಾಟ್ಸಾಪ್ ಸಂದೇಶ ಕಳುಹಿಸಿದರೆ 5 ಸಾವಿರ ಮಂದಿ ಸೇರುತ್ತಾರೆ. ಇಂದು ಇಲ್ಲಿ ಸೇರಿದ ಮಂದಿಯ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆರಂಭದಲ್ಲಿ ಇಷ್ಟೊಂದು ಸಂಖ್ಯೆ ಸಾಕು. ಆದರೆ ನಮ್ಮಲ್ಲಿ ಒಗ್ಗಟ್ಟು ಬೇಕು. ಒಂದೇ ನಿರ್ಧಾರ ಇರಬೇಕು. ರಾಜಕೀಯವನ್ನು ಒಳ ಸೇರಿಸಿಕೊಂಡರೆ ಕಷ್ಟ. ಆಯಾ ಭಾಗದ ಜನರು ತಂಡ ರಚಿಸಿಕೊಂಡು ಆಯಾ ಭಾಗದ ಶಾಸಕರ ಬಳಿಗೆ ಹೋಗಿ ನಮಗೆ ಸಾಂಪ್ರದಾಯಿಕ ಕೋಳಿ ಅಂಕ ಬೇಕು. ಜೂಜು ಕೋಳಿ ಅಂಕ ಬೇಡ ಎಂಬುದನ್ನು ತಿಳಿಸಬೇಕು. ಎಲ್ಲರೂ ಒಟ್ಟು ಸೇರಿ ಹೋರಾಟ ಮಾಡೋಣ. ಪುತ್ತೂರಿನಿಂದಲೇ ಈ ಹೋರಾಟ ಆರಂಭವಾಗಲಿ, ನಿಮ್ಮ ಜತೆ ನಾನಿದ್ದೇನೆ. ಆದರೆ ಜೂಜು ಕಟ್ಟುವ ಕೋಳಿ ಅಂಕದ ಪರ ನಾನಿಲ್ಲ ಎಂದರು.







