ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸರಕಾರಿ ರಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಜ.15ರಂದೇ ಸರಕಾರಿ ರಜೆ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಜ.14ರಂದು ನಡೆಯಲಿದ್ದರೂ, ಸರಕಾರಿ ರಜೆ ಜ.15ರಂದು ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕಾರಣವಾಗಿತ್ತು. 14ರಂದೇ ರಜೆ ನೀಡುವ ಬಗ್ಗೆ ಸ್ಪೀಕರ್ಯು.ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸರಕಾರದ ಗಮನ ಸೆಳೆದಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ. ಅವರು, ವಿಧಾನ ಸಭಾಧ್ಯಕ್ಷರು ರಜೆಯ ಕುರಿತಂತೆ ಮಾತನಾಡಿದ್ದರು. ಯಾರಾದರೂ ಮನವಿ ಸಲ್ಲಿಸಿದರೆ ಸರಕಾರಕ್ಕೆ ಕಳುಹಿಸಿಕೊಡುತ್ತೇನೆ ಎಂದು ಅವರಲ್ಲಿ ಹೇಳಿದ್ದೆ. ಆದರೆ ಜ.14ರಂದು ರಜೆ ನೀಡುವಂತೆ ಯಾವುದೇ ಮನವಿಗಳು ಬಂದಿಲ್ಲ. ಯಾರಾದರೂ ರಜೆ ನೀಡಿ ಎಂದು ಕೇಳಿದ್ದರೆ ಪರಿಶೀಲಿಸಬಹುದಿತ್ತು. ಹಾಗಾಗಿ ರಜೆ ಬದಲಾವಣೆ ಮಾಡಬೇಕಾದ ಪ್ರಮೇಯ ಉಂಟಾಗಿಲ್ಲ. ಜ.15ರಂದೇ ಸರಕಾರಿ ರಜೆ ಇರಲಿದೆ ಎಂದು ತಿಳಿಸಿದ್ದಾರೆ.
ಈ ನಡುವೆ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು, ಕಚೇರಿಗಳು ಬುಧವಾರ ರಜೆ ನೀಡಿದೆ. ಉಳಿದಂತೆ ಸರಕಾರಿ ಶಾಲೆ- ಕಾಲೇಜುಗಳು, ಕಚೇರಿಗಳಿಗೆ ಗುರುವಾರ ರಜೆ ಇರಲಿದೆ.






