ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ತೆಗೆಯಲು 74 ಕಾರ್ಯಾದೇಶ ಹಾಗೂ 21 ಪರವಾನಿಗೆ ಮಂಜೂರು ಮಾಡಲಾಗಿದೆ. ಪರವಾನಿಗೆ ಕೋರಿ ಸಲ್ಲಿಸಿರುವ ಒಟ್ಟು 63 ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪುಕಲ್ಲು(ಲ್ಯಾಟರೈಟ್ ಇಟ್ಟಿಗೆ) ಸಮಸ್ಯೆಯ ಕುರಿತು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಸೋಮವಾರದಂದು ವಿಧಾನಪರಿಷತ್ ಕಲಾಪದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994ರ ನಿಯಮ-3ಎ(ಎ) ರಂತೆ 74 ಕಾರ್ಯಾದೇಶಗಳನ್ನು ಮತ್ತು ನಿಯಮ-32 ರಂತೆ 21 ಪರವಾನಿಗೆ ಮಂಜೂರು ಮಾಡಲಾಗಿದ್ದು ಪ್ರಸ್ತುತ ಚಾಲ್ತಿಯಲ್ಲಿದೆ.
ಕೆಂಪು ಕಲ್ಲು ತೆಗೆಯಲು ಕಾರ್ಯಾದೇಶ ಕೋರಿದ 55 ಅರ್ಜಿಗಳು ಮತ್ತು ನಿಯಮ-32 ರಂತೆ ಪರವಾನಿಗೆ ಮಂಜೂರಾತಿ ಕೋರಿ ಸಲ್ಲಿಸಿದ 8 ಅರ್ಜಿಗಳ ವಿಲೇವಾರಿ ಬಾಕಿ ಇದೆ ಎಂದರು. ಅಕ್ರಮವಾಗಿ ಕೆಂಪುಕಲ್ಲು ಸಾಗಿಸುವವರ ವಿರುದ್ದ ದಂಡ ವಿಧಿಸಿ ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಭೂಮಿಯಲ್ಲಿ ಕೆಂಪು ಕಲ್ಲು ತೆಗೆಯಲು ಯಾವುದೇ ಪರವಾನಿಗೆ ನೀಡಿಲ್ಲ. ಕೆಂಪು ಕಲ್ಲಿಗೆ (ಲ್ಯಾಟರೈಟ್ ಬ್ರಿಕ್ಸ್) ವಿಧಿಸುತ್ತಿದ್ದ ಶುಲ್ಕಗಳನ್ನು ಕಡಿಮೆ ಮಾಡಿ ಸೆ.17ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.







