ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ನಡೆದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸಮಗ್ರ ತನಿಖೆಗೆ ಲೋಕಾಯುಕ್ತಕ್ಕೆ ಸದಸ್ಯರೋರ್ವರು ದೂರು ನೀಡಿದ್ದಾರೆ.
ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪುನೀತ್ ಕೆ ಎಸ್ ಅವರು ಮಾಡಿರುವ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರದ ಕುರಿತು 2024-25 ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಕಂಡುಬಂದಿದ್ದು ಈ ವರದಿಯನ್ನು ಆಧರಿಸಿ ಸಂಘದ ಸದಸ್ಯರೊಬ್ಬರು ಈ ಬಗ್ಗೆ ಸಹಕಾರಿ ಇಲಾಖೆಯ ನಿಬಂಧಕರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಹಕಾರ ಇಲಾಖೆಯಿಂದ ತನಿಖೆ ನಡೆಯುತ್ತಿದ್ದು ಸಿಇಒ ಮಾಡಿರುವ ಹಗರಣಗಳ ಬಗ್ಗೆ ಬಗೆದಷ್ಟು ಹಗರಣಗಳು ಹೊರಬರುತ್ತಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಲ ಪಡೆಯಲು ಬಂದ ರೈತರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಗರಣಗಳ ಬಗ್ಗೆ ತಿಳಿದೂ ಆಡಳಿತ ಮಂಡಳಿ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಲಾಗಿದೆ.
ಈಗಾಗಲೇ 5 ವರ್ಷದ ಲೆಕ್ಕಪರಿಶೋಧನಾ ವರದಿಯನ್ನು ಸಂಘದ ಸದಸ್ಯರು ಪಡೆದುಕೊಂಡಿದ್ದು ಸಂಘದ ಮಾಜಿ ಅಧ್ಯಕ್ಷ ದಾಮೋದರ ಗುಂಡ್ಯ ಇವರ ಅವಧಿಯಲ್ಲಿ ಕೋಟ್ಯಂತರ ರೂಪಾಯಿಯ ಹಗರಣ ಮಾಡಿರುವ ಬಗ್ಗೆ ದಾಖಲೆ ಸಿಕ್ಕಿದ್ದಾಗಿ ಹೇಳಲಾಗಿದೆ. ಇದರ ಆಧಾರದ ಮೇಲೆ ಮುಂದೆ ಲೋಕಾಯುಕ್ತಕ್ಕೆ ದೂರು ನೀಡಲು ತಯಾರಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.






