ಸಮಗ್ರ ನ್ಯೂಸ್: ಅಕ್ರಮವಾಗಿ ಗೋವು ಗಳನ್ನು ಕದ್ದು ಗೋಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಇದೀಗ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆಗಳಲ್ಲಿ ಅಕ್ರಮ ಜಾನುವಾರು ವಧೆ ಮಾಡುವ ಶೆಡ್ಗಳನ್ನು ಸೀಜ್ ಮಾಡಿದ್ದು, ಅಕ್ರಮ ಗೋಮಾಂಸ ಮಾಡುವವರಿಗೆ ಖಡಕ್ ವಾರ್ನಿಂಗ್ ಇದಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕೆರೆಬಳಿ ಎಂಬಲ್ಲಿ ನಾಸಿರ್ ಮತ್ತಿತರರು ಜಾನುವಾರು ವಧೆಗೆ ಬಳಸಿದ ಇದಿನಬ್ಬ ಎಂಬವರ ಮನೆ, ಶೆಡ್ಡನ್ನು ಕಲಂ 8 (1)ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಮಾಡಿದ್ದರು.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಟ್ಟು ಗ್ರಾಮದ ಮುಹಮ್ಮದ್ ರಫೀಕ್ ಎಂಬಾತನ ಮನೆ ಮತ್ತು ಖಾಲಿ ಜಾಗವನ್ನು ಕಲಂ 8 (1)ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಪುತ್ತೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಮಾಡಿದ್ದರು. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ವೇಳೆ ಆರೋಪಿ ಮುಹಮ್ಮದ್ ಮನ್ಸೂರ್ ಎಂಬಾತನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡು ತ್ತಿದ್ದ ಮಂಗಳೂರಿನ ಜೆಎಂ ರಸ್ತೆಯ ಭಟ್ಕಳ ಬಜಾರ್ ಬಂದರ್ ಕುದ್ರೋಳಿ ಬಳಿಯಿರುವ ಕಟ್ಟಡವನ್ನು ಕಲಂ 8 (1) ರ ಪ್ರಕಾರ ತನಿಖಾಧಿಕಾರಿ ಜಪ್ತಿ ಮಾಡಿ ಮುಟ್ಟುಗೋಲಿಗಾಗಿ ಮಂಗಳೂರು ಉಪವಿಭಾಗದ ದಂಡಾಧಿಕಾರಿಗೆ ವರದಿ ಸಲ್ಲಿಸಿದ್ದರು.
ಅದರಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020ರಡಿ ಕೃತ್ಯಕ್ಕೆ ಬಳಸಿರುವ ಸ್ಥಳ ಮತ್ತು ಕಟ್ಟಡಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







