ಏಳೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಟೀಚರ್| ಜಿಲ್ಲಾಧಿಕಾರಿಯಿಂದ ಪ್ರಶಂಸೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ (ಯುಜಿಎಚ್‌ಪಿಎಸ್) ಸಹ ಶಿಕ್ಷಕಿ ಶಾಂತಮ್ಮ ಪೂರ್ಣಗೊಳಿಸಿದ್ದಾರೆ.

Ad Widget ... ..

ಶಿಕ್ಷಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಶಾಂತಮ್ಮ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ₹1,001 ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿದ್ದಾರೆ. ತಮಗೆ ವಹಿಸಿದ ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸಿರುವ ಶಿಕ್ಷಕಿಯ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

Ad Widget

ಶಾಂತಮ್ಮ ಅವರಿಗೆ ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿ ಗ್ರಾಮದ 86 ಮನೆಗಳನ್ನು ಸಮೀಕ್ಷೆ ಮಾಡುವಂತೆ ನಿಗದಿಪಡಿಸಲಾಗಿತ್ತು. ಸಮೀಕ್ಷೆ ಪೂರ್ಣಕ್ಕೆ 15 ದಿನಗಳಿದ್ದರೂ, ಶಾಂತಮ್ಮ ಅವರು ಅವಧಿಗೂ ಮುಂಚೆ ಕೇವಲ ಏಳೇ ದಿನದಲ್ಲಿ ಅಷ್ಟೂ ಮನೆಗಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮುಗಿಸಿದ್ದರು.

‘ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು ಸಮೀಕ್ಷೆ ಕಾರ್ಯ ತ್ವರಿತವಾಗಿ ಸಾಗಲು ಸಹಕಾರಿಯಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೀವು ನೀಡಿದ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತ ಪ್ರಶಂಸಿಸುತ್ತದೆ. ತಮ್ಮ ಈ ಕಾರ್ಯಶ್ರದ್ದೆಗೆ ನನ್ನ ಸ್ವಂತ ಹಣದಿಂದ ನಗದು ಬಹುಮಾನ ನೀಡಿ ಶ್ಲಾಘಿಸಿದ್ದೇನೆ. ಮುಂದೆಯೇ ನಿಮ್ಮಿಂದ ಇಂತಹದ್ದೇ ಕಾರ್ಯಕ್ಷಮತೆಯನ್ನು ಜಿಲ್ಲಾಡಳಿತ ಬಯಸುತ್ತದೆ’ ಎಂದು ಜಿಲ್ಲಾಧಿಕಾರಿ ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *