ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ ಚಿನ್ನಯ್ಯ ದಾಖಲಿಸಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದ್ದು, ಸದ್ಯ ಈ ತಂಡ ತನ್ನ ತನಿಖೆಯನ್ನು ಮುಂದುವರಿಸಿದೆ.
ಮೊದಲಿಗೆ ಚಿನ್ನಯ್ಯ ತೋರಿಸಿದ ಜಾಗಗಳಲ್ಲಿ ಉತ್ಖನನ ಮಾಡಿದ ಎಸ್ಐಟಿ ಬಳಿಕ ಆತನನ್ನು ಬಂಧಿಸಿದ್ದು, ಸದ್ಯ ಇದೀಗ ಸೌಜನ್ಯ ಮಾವ ವಿಠಲ ಗೌಡ ಹೇಳಿದ ಜಾಗದಲ್ಲಿ ಬುರುಡೆ ಹಾಗೂ ಮೂಳೆಗಳನ್ನು ಸಂಗ್ರಹಿಸಿದೆ.
ಇನ್ನು ಮೊದಲಿಗೆ ತಾನು ನೂರಾರು ಶವಗಳನ್ನು ಹೂತಿದ್ದು ಅವುಗಳ ಜಾಗಗಳನ್ನು ತೋರಿಸುತ್ತೇನೆ ಎಂದಿದ್ದ ಚಿನ್ನಯ್ಯ ಶೋಧ ಕಾರ್ಯದ ಸಂದರ್ಭದಲ್ಲಿ ಸರಿಯಾದ ಜಾಗಗಳನ್ನು ತೋರಿಸುವಲ್ಲಿ ವಿಫಲನಾದ ಎಂಬ ಆರೋಪಗಳು ಅಸ್ತಿಪಂಜರ ಸಿಗದಿದ್ದಾಗ ಕೇಳಿಬಂದವು.
ಅಲ್ಲದೇ ಚಿನ್ನಯ್ಯನ ಬಳಿ ಸುಳ್ಳು ಹೇಳಿಸಲಾಗಿದೆ ಎಂದೂ ಸಹ ಆರೋಪ ಮಾಡಲಾಯಿತು. ಅದರಲ್ಲೂ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ ಗೌಡ ಈ ಷಡ್ಯಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು.
ಈ ಆರೋಪಗಳಿಗೆ ಉತ್ತರವೆಂಬಂತೆ 2023ರಲ್ಲಿ ಚಿನ್ನಯ್ಯ ತಮ್ಮ ಮನೆಗೆ ಬಂದು ಧರ್ಮಸ್ಥಳದಲ್ಲಿ ನಡೆದ ಕರ್ಮಕಾಂಡಗಳ ಬಗ್ಗೆ ಮಾತನಾಡಿದ ವಿಡಿಯೊವನ್ನು ಮಹೇಶ್ ಶೆಟ್ಟಿ ತಿಮರೋಡಿ ಬಿಡುಗಡೆ ಮಾಡಿದರು.
ಅಲ್ಲಿಗೆ ಚಿನ್ನಯ್ಯ ತಾನಾಗಿಯೇ ಬಂದು ಹೇಳಿಕೆ ನೀಡಿದ್ದಾನೆ ಎಂಬ ಸತ್ಯಾಂಶ ಹೊರಬಂತು. ಹೀಗೆ ಮಹೇಶ್ ಶೆಟ್ಟಿ ತಿಮರೋಡಿ ಬಿಡುಗಡೆ ಮಾಡಿದ ವಿಡಿಯೊಗಳು ವೈರಲ್ ಆದ ಬೆನ್ನಲ್ಲೇ ಅತ್ತ ಸತ್ಯಮಂಗಲದಲ್ಲಿರುವ ಚಿನ್ನಯ್ಯನ ಪತ್ನಿ ಮಲ್ಲಿಕಾ ರಿಪಬ್ಲಿಕ್ ಕನ್ನಡ ನಡೆಸಿದ ಸಂದರ್ಶನದಲ್ಲಿ ಮಾತನಾಡಿ ತನ್ನ ಗಂಡನಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಅಲ್ಲದೇ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ ಗೌಡ ಈ ಮೂವರು ಸೇರಿ ಮಾಡಿರುವ ಷಡ್ಯಂತ್ರವಿದು, ಅವರಿಗೆ ವೀರೇಂದ್ರ ಹೆಗ್ಗಡೆ ಒಂದು ದಿನವಾದರೂ ಜೈಲಿಗೆ ಹೋಗಬೇಕೆಂಬ ಆಸೆ ಇದೆ, ಧರ್ಮಸ್ಥಳ ದೇವಸ್ಥಾನವನ್ನು ಸರ್ಕಾರಕ್ಕೆ ಸೇರಿಸಬೇಕು ಎಂಬ ಇಚ್ಛೆಯೂ ಸಹ ಇದೆ, ಹೀಗಾಗಿಯೇ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ತನ್ನ ಪತಿಗೆ ಧರ್ಮಸ್ಥಳದ ಬಗ್ಗೆ ಎಲ್ಲ ಮಾಹಿತಿ ಇದ್ದ ಕಾರಣ ಹೀಗೆ ಉಪಯೋಗಿಸಿಕೊಂಡಿದ್ದಾರೆ ಎಂದು ಮಲ್ಲಿಕಾ ಆರೋಪ ಮಾಡಿದ್ದಾರೆ. ಇದೇ ಮಲ್ಲಿಕಾ 2023ರಲ್ಲಿ ಚಿನ್ನಯ್ಯನ ಜೊತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಬಂದಿದ್ದರು. ಆ ಸಮಯದಲ್ಲಿ ಚಿನ್ನಯ್ಯ ಆರೋಪ ಮಾಡುತ್ತಿದ್ದಾಗ ಪಕ್ಕದಲ್ಲಿಯೇ ಕುಳಿತಿದ್ದರು.







