ಸಮಗ್ರ ನ್ಯೂಸ್: ಸಾಮಾನ್ಯವಾಗಿ ಯುದ್ಧದಲ್ಲಿ ಪಾಲ್ಗೊಂಡು ಸೇವೆಯಿಂದ ನಿವೃತ್ತಿ ಪಡೆದ ಟ್ಯಾಂಕ್ ಮತ್ತಿತರ ಸೇನೆಯ ಆಯುಧಗಳನ್ನು ವಾರ್ ಟ್ರೋಫಿ (ಯುದ್ಧ ಸ್ಮರಣಿಕೆ) ರೀತಿಯಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಅದೇ ರೀತಿ ಮಂಗಳೂರಿಗೆ ಟ್ಯಾಂಕ್ ಅನ್ನು ನೀಡುವಂತೆ ಸಂಸದ ಕ್ಯಾ|ಬ್ರಿಜೇಶ್ ಚೌಟ ರಕ್ಷಣಾ ಸಚಿವಾಲಯಕ್ಕೆ ಮನವಿ ಮೇರೆಗೆ ಯುದ್ದ ಟ್ಯಾಂಕ್ ಮಂಗಳೂರು ತಲುಪಿದೆ.
ಕದ್ರಿ ಯುದ್ಧಸ್ಮಾರಕ ಅಥವಾ ಸರ್ಕಿಟ್ ಹೌಸ್ ಮುಂಭಾಗ ಅಥವಾ ಇತರ ಯೋಗ್ಯ ಸ್ಥಳದಲ್ಲಿ ಟ್ಯಾಂಕ್ ಅನ್ನು ಇರಿಸಲಾಗುವುದು. ಅದಕ್ಕಾಗಿ ಪ್ರತ್ಯೇಕ ವೇದಿಕೆ ನಿರ್ಮಿಸುವ ಕೆಲಸವನ್ನು ಮಹಾನಗರಪಾಲಿಕೆ ಮಾಡಲಿದೆ. ಟಿ-55 ಟ್ಯಾಂಕ್ ಹಿಂದೆ ಯುದ್ದದಲ್ಲಿ ಬಳಕೆಯಾಗಿದ್ದು, ಸದ್ಯ ಬಳಸುವ ಸ್ಥಿತಿಯಲ್ಲಿಲ್ಲ. ಅಂತಹವುಗಳನ್ನು ದೇಶದ ವಿವಿಧೆಡೆ ಆಸಕ್ತ ಸಂಸ್ಥೆಗಳಿಗೆ ದೇಶದಲ್ಲಿ “ಸ್ಪೂರ್ತಿದಾಯಕ’ವಾಗಿ ಪ್ರದರ್ಶಿಸಲು ನೀಡಲಾಗುತ್ತದೆ. ಅದರಂತೆ ಮೂರು ತಿಂಗಳ ಹಿಂದೆ ಮಹಾನಗರಪಾಲಿಕೆಗೆ ಉಚಿತವಾಗಿ ರಕ್ಷಣಾ ಇಲಾಖೆ ನೀಡಲು ಒಪ್ಪಿದೆ. ಪುಣೆಯ ಕಿರ್ಕಿ ಎಂಬಲ್ಲಿನ ಡಿಪೋದಿಂದ ಈ ಟಿ-55 ಟ್ಯಾಂಕ್ ತರಲಾಗಿದೆ.
ಪ್ರವಾಸೋದ್ಯಮಕ್ಕೆ ಮೆರುಗು
ಸುಮಾರು 40 ಟನ್ ತೂಕವಿರುವ ಟ್ಯಾಂಕ್ ಇದಾಗಿದ್ದು, ಯುದ್ಧ ಬಳಕೆಯ ಟ್ಯಾಂಕ್ ಮಂಗಳೂರು ಪ್ರವಾಸೋದ್ಯಮಕ್ಕೂ ಆಕರ್ಷಣೆ ತುಂಬಲಿದೆ. ನಗರದಲ್ಲಿ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಲಿದ್ದು, ಗಾಳಿ, ಬಿಸಿಲಿನಿಂದ ರಕ್ಷಣೆ ನೀಡುವಂತಹ ಶೆಡ್ ಒದಗಿಸಬೇಕಿದೆ. ಟಿ- 55 ಟ್ಯಾಂಕ್ಗಳನ್ನು 1965 ಹಾಗೂ 1971ರ ಪಾಕಿಸ್ತಾನ ಯುದ್ಧದಲ್ಲಿ ಬಳಸಲಾಗಿತ್ತು. ಸಂಸತ್ತಿಗೆ ಭಯೋತ್ಪಾದಕರ ಆಕ್ರಮಣದ ನಂತರ ನಡೆದ ಆಪರೇಷನ್ ಪಾರಾಕ್ರಮ ದಲ್ಲೂ ಭಾಗಿಯಾಗಿದೆ. ಭಾರತದ ಮಿಲಿಟರಿ ಪಡೆಯ ಶೌರ್ಯದ ಪ್ರತೀಕವಾಗಿ ಈ ಟ್ಯಾಂಕ್ಗಳನ್ನು ಪ್ರಸ್ತುತ ವಿವಿಧ ಕಡೆಗಳಲ್ಲಿ ಪ್ರದರ್ಶನಕ್ಕೆ ಇರಿಸಲಾಗುತ್ತದೆ. ಇದರ ವೀಕ್ಷಣೆಯಿಂದ ಯುವಜನತೆಗೆ ಸೇನೆ ಸೇರುವ ಸ್ಫೂರ್ತಿ ಸಿಗಬೇಕು ಎನ್ನುವುದು ಇದರ ಉದ್ದೇಶ.







