ಸಮಗ್ರ ನ್ಯೂಸ್: ತೋಟಗಾರಿಕೆ ಬೆಳೆಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವಾದ ಬೆಳೆ ವಿಮೆ ಮಾಡಿಸಿಕೊಳ್ಳಲು ಜು. 31 ಕೊನೇ ದಿನವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು. 28 ರವರೆಗೆ 1,16,000 ನೋಂದಣಿಗಳಾಗಿವೆ. ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರು ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ.
ಜೂ. 23 ರಂದು ಪ್ರಸಕ್ತ ಸಾಲಿನ ವಿಮೆ ಮಾಡಿಸಿಕೊಳ್ಳಲು ಸರಕಾರ ಅಧಿಸೂಚನೆ ಹೊರಡಿಸಿತ್ತು. ಜೂ. 24ರಿಂದಲೇ ಅರ್ಜಿ ಸಲ್ಲಿಕೆ ಆರಂಭಗೊಂಡಿತ್ತು. ಬಹುತೇಕ ಅಡಿಕೆ ಬೆಳೆಗಾರರು ವಿಮೆ ನೋಂದಣಿ ಮಾಡಿಸಿದ್ದಾರೆ. ಯೋಜನೆಯಡಿ ಅಡಿಕೆ ಬೆಳೆಗೆ ಪ್ರತೀ ಹೆಕ್ಟೆರ್ಗೆ 6,400 ರೂ. ಹಾಗೂ ಕಾಳು ಮೆಣಸಿಗೆ 2,350 ರೂ. ಮೊತ್ತ ಪಾವತಿಸಬೇಕಾಗುತ್ತದೆ.
ಬೆಳೆಸಾಲ ಪಡೆದ ರೈತರು ಸಾಲ ಹೊಂದಿರುವ ಬ್ಯಾಂಕ್ನಲ್ಲಿ ಹಾಗೂ ಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ಗಳಲ್ಲಿ ಯೋಜನೆಯಡಿ ನೋಂದಾಯಿಸಬಹುದು. ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ಗಳ ಮೂಲಕವೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಭತ್ತದ ಬೇಸಾಯ ಮಾಡುವವರಿಗೆ ವಿಮೆ ಮಾಡಿಸಿಕೊಳ್ಳಲು ಜು. 16ರ ವರೆಗೆ ಅವಕಾಶವಿದೆ. ಒಂದು ಎಕ್ರೆಗೆ 516 ರೂ. ವಿಮಾ ಕಂತು ಪಾವತಿಸಬೇಕು. ಪ್ರಕೃತಿ ವಿಕೋಪಗಳಿಂದ/ಹವಾಮಾನ ವೈಪರೀತ್ಯದಿಂದಾಗಿ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25ರ ಭಾಗವನ್ನು ನೀಡಲಾಗುತ್ತದೆ. ಬಿತ್ತನೆಯಿಂದ ಕಟಾವು ಹಂತದವರೆಗಿನ ಅವಧಿಯಲ್ಲಿ ಶೇ. 50ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುತ್ತದೆ.







