ಸಮಗ್ರ ನ್ಯೂಸ್: ಯುವಕನೊಬ್ಬ ಕಾಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಸಾವಿಗೂ ಮುಂಚೆ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳನ್ನು ಕೆಲವರು ತಮ್ಮ ಕಾಮ ತೃಷೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಯುವಕ ವಿಡಿಯೋದಲ್ಲಿ ದೂರಿದ್ದಾನೆ.
ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿಕ್ಕ ತೌಡತ್ತಿ ಗ್ರಾಮದ ಸಂತೋಷ ಗಣಪತಿ ನಾಯ್ಕ(26) ತಾಲೂಕಿನ ಕಾಳೇನಳ್ಳಿ ಸಮೀಪದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಚನಮಾಂವನ ಚರಣ, ಮನೋಜ ಹಾಗೂ ಲೋಕೇಶ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಮೂವರ ಜತೆ ಇನ್ನೂ ನಾಲ್ವರು ಸೇರಿ ತನ್ನ ಮಗನಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ಮೃತನ ತಂದೆ ಗಣಪತಿ ನಾರಾಯಣ ನಾಯ್ಕ ಅವರು ಸಿದ್ದಾಪುರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ತಾಲೂಕಿನ ಕೆಲವರು ಹೈಸ್ಕೂಲ್ ವಿದ್ಯಾರ್ಥಿಗಳನ್ನು ತಮ್ಮ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಂತೋಷ ತಾನು ಮಾಡಿದ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಹೈಸ್ಕೂಲ್ ವಿದ್ಯಾರ್ಥಿನಿಯರು ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದಾನೆ. `ನಾನು ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೆ. ಆಕೆಗಾಗಿ ನಾನು ಇಂಥ ಕೃತ್ಯದ ಬಗ್ಗೆ ಮಾಹಿತಿ ಕಲೆ ಹಾಕಿದೆ. ನಾನು ಒಂದು ಹುಡುಗಿಯ ಹೆಸರಿನಲ್ಲಿ ನಕಲಿ ಜಾಲತಾಣ ಖಾತೆ ಸೃಷ್ಟಿ ಮಾಡಿ ಅವರ ಜತೆ ಚಾಟ್ ಮಾಡಿದೆ. ಅವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂತು. ಬಾಲಕಿಯರನ್ನು ತಮ್ಮ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದರು. ಅದರ ಫೋಟೋ ವಿಡಿಯೋ ಮಾಡುತ್ತಿದ್ದರು ಎಂದು ಆತನ ಪ್ರೇಯಸಿಯ ಜತೆ ಮಾಡಿದ ಅಶ್ಲೀಲ
ಚಾಟ್ ಹಾಗೂ ಕೆಲವು ಅಶ್ಲೀಲ ಫೋಟೋಗಳನ್ನು ವಿಡಿಯೋಗೆ ಸೇರಿಸಿದ್ದಾನೆ.
ನಾನು ಅವರ ವಿರುದ್ಧ ದಾಖಲೆ ಕಲೆ ಹಾಕುತ್ತಿರುವುದು ತಿಳಿಯುತ್ತಿದ್ದಂತೆ ಅವರು ನನಗೆ ಜೀವ ಬೆದರಿಕೆ ಹಾಕಿದರು. ನನ್ನ ಮನೆಗೆ ಬಂದು ನನ್ನ ಟ್ಯಾಬ್ ಕದ್ದೊಯ್ದರು ಎಂದು ದೂರಿದ್ದಾನೆ. ಯುವಕ ಡೆತ್ ನೋಟ್ ಸಹ ಬರೆದಿಟ್ಟಿದ್ದು, ರಾಜಕೀಯ ಪಕ್ಷವೊಂದರ ಮುಖಂಡ, ಒಬ್ಬ ವಕೀಲನ ಹೆಸರನ್ನೂ ಆತ ಹೇಳಿದ್ದಾನೆ ಎನ್ನಲಾಗಿದೆ. ಕೆಲವು ಮೊಬೈಲ್ ನಂಬರ್ಗಳನ್ನು ತೋರಿಸುವ ಮೂಲಕ ವಿಡಿಯೋದಲ್ಲಿ ಸಾಕ್ಷ್ಯಒದಗಿಸಿದ್ದಾನೆ. ನಾನು ನಕಲಿ ಖಾತೆ ಸೃಷ್ಟಿ ಮಾಡಿ ಚಾಟ್ ಮಾಡಿ ತಪ್ಪು ಮಾಡಿದ್ದು ನಿಜ. ನನ್ನ ಪ್ರೇಯಸಿಗಾಗಿ ಇಷ್ಟೆಲ್ಲ ಮಾಡಿದೆ. ಆದರೆ, ಆಕೆಯೇ ನನ್ನ ವಿರುದ್ಧ ನಿಂತಿದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಂತೋಷ ವಿಡಿಯೋದಲ್ಲಿ ಹೇಳಿದ್ದಾನೆ.