ಸಮಗ್ರ ನ್ಯೂಸ್: ಇದೇ ಬರುವ ಆ.15ರಿಂದ ರಾಜ್ಯದ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಲಾಗುವುದು. ಯಾರೂ ಬಳಕೆ ಮಾಡುವ ಹಾಗಿಲ್ಲ ಎಂದು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದರು.
ಕಳೆದ 3 ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. 11,322 ಆಸ್ತಿ ಗುರುತಿಸಿ ನಮೂದಿಸಲಾಗಿದೆ ಎಂದ ಅವರು, ಹೊರರಾಜ್ಯಗಳಲ್ಲಿ ವಸತಿ ಗೃಹಗಳನ್ನು ನಿರ್ಮಿಸಲೂ ಯೋಜಿಸಲಾಗಿದೆ. ತಿರುಪತಿಯ ಗಾಂಧಿ ರಸ್ತೆಯಲ್ಲಿರುವ ಜಾಗದಲ್ಲಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ ಎಂದೂ ಮಾಹಿತಿ ನೀಡಿದರು.
ಇನ್ನು ದೇವಸ್ಥಾನದ ಅರ್ಚಕರಿಗೂ ಸಿಹಿ ಸುದ್ದಿ ನೀಡಿರುವ ಅವರು, ಅರ್ಚಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಸೌಕರ್ಯ ಒದಗಿಸಲಾಗಿದೆ. 249 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ ಹಾಗೂ ಮರಣ ಹೊಂದಿದ 7 ಅರ್ಚಕರ ಕುಟುಂಬಗಳಿಗೆ 14 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿದ್ದೇವೆ ಎಂದು ತಿಳಿಸಿದರು.