ಸಮಗ್ರ ನ್ಯೂಸ್ : ನಾಯಕ ಮತ್ತು ವಕ್ತಾರ ಪ್ರೊ.ಗೌರವ್ ವಲ್ಲಭ್ ಅವರು ಕಾಂಗ್ರೆಸ್ ನಡೆಯ ಬಗ್ಗೆ ಅಸಮಾಧಾನ ಉಂಟಾಗಿ ಪಕ್ಷಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ವಲ್ಲಭ್ ಅವರು, ಕಾಂಗ್ರೆಸ್ ಪಕ್ಷ ಸಾಗುತ್ತಿರುವುದರ ಬಗ್ಗೆ ನನಗೆ ಸಮಾಧಾನವಿಲ್ಲ, ಪಕ್ಷಕ್ಕೆ ದಿಕ್ಕು ತೋಚದಂತಾಗಿದೆ, ಅಲ್ಲದೆ ಸನಾತನ ವಿರೋಧಿ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲ, ಜತೆಗೆ ದೇಶದ ಸಂಪತ್ತನ್ನು ಸೃಷ್ಟಿಸಿದವರನ್ನು ಬೆಳಗ್ಗೆ ಮತ್ತು ಸಂಜೆ ನಿಂದಿಸಲು ಸಾಧ್ಯವಿಲ್ಲ. ಹೀಗಾಗಿ ನನ್ನ ಹುದ್ದೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಾನು ಕಾಂಗ್ರೆಸ್ಗೆ ಸೇರಿದಾಗ, ಯುವಕರು, ಬುದ್ಧಿಜೀವಿಗಳು ಮತ್ತು ಅವರ ಆಲೋಚನೆಗಳನ್ನು ಗೌರವಿಸುವ ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ಎಂದು ನಾನು ನಂಬಿದ್ದೆ. ಆದರೆ ಹೊಸ ಆಲೋಚನೆಗಳನ್ನು ಹೊಂದಿರುವ ಯುವಕರೊಂದಿಗೆ ಪಕ್ಷ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೆಲಕಾಲ ಅನಿಸಿತ್ತು. ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ ಅಲ್ಲದೆ ನವ ಭಾರತದ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಕಾರಣದಿಂದಾಗಿ ಪಕ್ಷವು ಅಧಿಕಾರಕ್ಕೆ ಬರುತ್ತಿಲ್ಲ ಅಥವಾ ಪ್ರಬಲ ಪ್ರತಿಪಕ್ಷದ ಪಾತ್ರವನ್ನು ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಲ್ಲಭ್ ಹೇಳಿದ್ದಾರೆ.







