ಸಮಗ್ರ ನ್ಯೂಸ್: ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಬದ್ಲಾಪುರ್ನಲ್ಲಿ ನಡೆದಿದೆ.
ಒಂಬತ್ತು ವರ್ಷದ ಬಾಲಕನನ್ನು ಮಸೀದಿಯಲ್ಲಿ ಸಂಜೆಯ ಪ್ರಾರ್ಥನೆಯ ವೇಳೆ ದುಷ್ಕರ್ಮಿಗಳು ಅಪಹರಿಸಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ. ನಂತರ ಇಬಾದ್ನ ಪೋಷಕರಿಗೆ ಅನಾಮಧೇಯ ಕರೆ ಮಾಡಿ ಆತನನ್ನು ಕಿಡ್ನಾಪ್ ಮಾಡಿರುವುದಾಗಿ ತಿಳಿಸಿದ್ದಾರೆ.
ಮನೆಯವರ ಬಳಿ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಟೈಲರ್ ಆಗಿರುವ ಆತನ ತಂದೆ ಮುದಾಸಿರ್ ಬುಬರ್ ಕುಲಗಾಂವ್ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್.ಸ್ವಾಮಿ ನೇತೃತ್ವದಲ್ಲಿ ಬದ್ಲಾಪುರ ಪೊಲೀಸರು ಹಾಗೂ ಅಪರಾಧ ವಿಭಾಗದ ಪೊಲೀಸರು ಗೋರೆಗಾಂವ್ ಪ್ರದೇಶದಲ್ಲಿ ರಾತ್ರಿಯಿಡೀ ಇಬಾದ್ಗಾಗಿ ಹುಡುಕಾಟ ನಡೆಸಿದ್ದರು.
ಪೊಲೀಸರು ಕರೆ ಬಂದ ನಂಬರ್ ಟ್ರೇಸ್ ಮಾಡಿ ಅಪಹರಣಕಾರನ ಮನೆ ತಲುಪಿದ್ದಾರೆ. ಅಷ್ಟೊತ್ತಿಗಾಗಲೇ ಪೊಲೀಸರು ತಮ್ಮ ಮನೆಗೆ ಬರುತ್ತಿರುವುದು ಆರೋಪಿಗೆ ಅರಿವಾಗಿ, ಪೊಲೀಸರು ತಮ್ಮ ಮನೆಗೆ ಬಂದು ತನಿಖೆ ನಡೆಸುತ್ತಾರೆ ಎಂಬ ಭಯದಿಂದ ಆರೋಪಿಗಳು ಇಬಾದ್ ನನ್ನು ಕೊಂದು ಗೋಣಿಚೀಲದಲ್ಲಿ ಶವವನ್ನು ತುಂಬಿ ಮನೆಯ ಹಿಂದೆ ಬಚ್ಚಿಟ್ಟಿದ್ದರು. ನಂತರ ಪೊಲೀಸರು ಗೋಣಿಚೀಲವನ್ನು ವಶಪಡಿಸಿಕೊಂಡರು.ಇಬಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಡಿಎಸ್ ಸ್ವಾಮಿ ತಿಳಿಸಿದ್ದಾರೆ. ಅಪರಾಧದ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದರು






