ಆಗ್ರ: ಮಣಪುರಂ ಗೋಲ್ಡ್ ಲೋನ್ ಕಚೇರಿಗೆ ನುಗ್ಗಿದ ಮುಸುಕುಧಾರಿ ದರೋಡೆಕೋರರು 15 ಕೆಜಿ ಚಿನ್ನ ಮತ್ತು ಐದು ಲಕ್ಷ ನಗದು ಹೊತ್ತೊಯ್ದ ಘಟನೆ ಆಗ್ರಾದ ಕಮಲಾ ನಗರದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ದರೋಡೆಕೋರರನ್ನು ಎನ್ಕೌಂಟರ್ ಮಾಡಿದ್ದಾರೆ.
ಗೋಲ್ಡ್ ಲೋನ್ ಕಚೇರಿಗೆ ನುಗ್ಗಿದ 6 ಜನ ಮುಸುಕುದಾರಿ ದರೋಡೆಕೋರರು ಕಚೇರಿ ಸಿಬ್ಬಂದಿಗಳನ್ನು ಬಂದೂಕು ತೋರಿಸಿ ಬೆದರಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕಚೇರಿಯಲ್ಲಿದ್ದ ನಗ-ನಗದನ್ನು ತಮ್ಮ ಬ್ಯಾಗ್ ನಲ್ಲಿ ತುಂಬಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅದರ ಬೆನ್ನಲ್ಲೇ ಕಚೇರಿ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಿಸಿ ಟಿವಿ ಪರಿಶೀಲಿಸಿದ್ದಾರೆ. ಆರೋಪಿಗಳ ಗುರುತು ಹಿಡಿದ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ. ಕೆಲವು ದರೋಡೆಕೋರರು ನಗರದ ಮೆಡಿಕಲ್ ಶಾಪ್ ಒಂದರಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಡಲೇ ಪೊಲೀಸರ ತಂಡ ಸ್ಥಳಕ್ಕೆ ತೆರಳಿದ.
ಪೊಲೀಸರನ್ನು ಕಂಡ ದರೋಡೆಕೋರರು ತಮ್ಮಲ್ಲಿದ್ದ ಬಂದೂಕಿನಿಂದ ಪೊಲೀಸರ ಮೇಲೆ ದಾಳಿ ಆರಂಭಿಸಿದ್ದಾರೆ. ಪ್ರತಿದಾಳಿ ನಡೆಸಿದ ಪೊಲೀಸರ ಗುಂಡಿಗೆ ಇಬ್ಬರು ದರೋಡೆಕೋರರು ಹತರಾಗಿದ್ದಾರೆ.
ಮನೀಶ್ ಪಾಂಡೆ ಮತ್ತು ನಿದೋರ್ಶ್ ಕುಮಾರ್ ಮೃತಾಪಟ್ಟವರು. ಸ್ಥಳದಿಂದ 7.5 ಕೆಜಿ ಚಿನ್ನ ಮತ್ತು 2 ಲಕ್ಷ ರೂ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.






