ಸಮಗ್ರ ನ್ಯೂಸ್: ರಜೆಯ ಮೇಲೆ ಮನೆಗೆ ಬಂದಿದ್ದ ಯೋಧನನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಕುಲ್ಗಾಮ್ ನಲ್ಲಿ ನಡೆದಿದೆ.
ಜಾವೇದ್ ಅಹ್ಮದ್ ವಾನಿ (25) ಅಪರಹರಣಕ್ಕೊಳಗಾದ ಯೋಧ ಎಂದು ತಿಳಿದು ಬಂದಿದೆ. ಜಾವೇದ್ ಮನೆಯಿಂದ ಅಂಗಡಿಯೊಂದಕ್ಕೆ ತೆರಳುವುದಾಗಿ ಹೇಳಿ ಕಾರಿನಲ್ಲಿ ಹೋಗಿದ್ದರು. ಆದರೆ ತುಂಬಾ ಸಮಯದವರೆಗೂ ಅವರು ವಾಪಾಸ್ ಆಗದೇ ಇರುವುದರಿಂದ ಕುಟುಂಬಸ್ಥರು ಹುಡುಕಾಟ ಆರಂಭಿಸಿದಾಗ ಅವರ ಕಾರು ಪರಂಹಾಲ್ ಎಂಬ ಗ್ರಾಮದಲ್ಲಿ ಪತ್ತೆಯಾಗಿದೆ. ಕಾರಿನ ಡೋರ್ಗಳು ತೆರೆದಿದ್ದು ಕಾರಿನಲ್ಲಿ ಅವರ ಚಪ್ಪಲಿ ಹಾಗೂ ರಕ್ತದ ಕಲೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾವೇದ್ ಅವರನ್ನು ಲಡಾಕ್ (Ladakh) ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಮಗನನ್ನು ಹುಡುಕಿಕೊಡುವಂತೆ ಯೋಧನ ತಂದೆ ಪೊಲೀಸರಿಗೆ ಮನವಿ ಮಾಡಿದ್ದಾರೆ.






