ಸಮಗ್ರ ನ್ಯೂಸ್: ಒಡಿಶಾ ರೈಲು ದುರಂತದ ನೋವಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇದರ ನಡುವೆ ಕೆಲವು ಭಯಾನಕ ಘಟನೆಗಳೂ ನಡೆದಿದೆ. ಮಗನ ಬದುಕಿಸಲು ತಂದೆ ಬರೋಬ್ಬರಿ 230 ಕಿಲೋಮೀಟರ್ ಆಂಬ್ಯುಲೆನ್ಸ್ ಮೂಲಕ ತೆರಳಿ, ಕೊನೆಗೆ ಶವಗಾರದಲ್ಲಿಟ್ಟಿದ್ದ ಶವಗಳ ರಾಶಿಯಿಂದ ಮಗನ ಜೀವಂತವಾಗಿ ಹೊರತೆಗೆದು ಆಸ್ಪತ್ರೆ ದಾಖಲಿಸಿದ ಘಟನೆಯೂ ನಡೆದಿದೆ. ಎರಡು ದಿನದ ಸತತ ಹುಡುಕಾಟ ಹಾಗೂ ಪರಿಶ್ರಮದಿಂದ ಮಗನ ಜೀವವನ್ನು ಉಳಿಸಿದ ತಂದೆಗೆ ಎಲ್ಲರು ಶಹಬ್ಬಾಷ್ ಎಂದಿದ್ದಾರೆ.
ಹೌರಾದ ಅಂಗಡಿ ಮಾಲೀಕ ಹೆಲರಾಮ್ ತನ್ನ 24 ವರ್ಷದ ಮಗ ಬಿಸ್ವಜೀತ್ ಮಲಿಕ್ನನ್ನ ಉಳಿಸಿದ ರೋಚಕ ಕತೆ ಇಲ್ಲಿದೆ. ಕೊರಮಂಡಲ್ ಎಕ್ಸ್ಪ್ರೆಸ್ ರೈಲಿಗೆ ಮಗನ ಹತ್ತಿಸಿ ಮನೆಗೆ ಮರಳಿದ ತಂದೆಗೆ ಕೆಲ ಹೊತ್ತಲ್ಲೇ ಅಪಘಾತದ ಸುದ್ದಿ ಬಂದಿದೆ. ತಕ್ಷಣವೇ ಮಗನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಬಿಸ್ವಜಿತ್ ತೀವ್ರವಾಗಿ ಗಾಯಗೊಂಡಿದ್ದೇನೆ ಎಲ್ಲಿದ್ದೇನೆ ಎಂದು ತಿಳಿಯುತ್ತಿಲ್ಲ ಎಂದಷ್ಟೇ ಹೇಳಿದ್ದಾನೆ. ಮತ್ತೆ ಫೋನ್ ಕಟ್ ಮಾಡಿಲ್ಲ. ಆದರೆ ಮಾತಿಲ್ಲ. ಇತ್ತ ತಂದೆ ಮತ್ತಷ್ಟು ಆಘಾತಗೊಂಡಿದ್ದಾರೆ.
ತನ್ನ ಮನೆಯಿಂದ 230 ಕಿಲೋಮೀಟರ್ ದೂರದಲ್ಲಿ ಅಪಘಾತ ನಡೆದಿತ್ತು. ತಕ್ಷಣ ತಲುಪಲು ಆಂಬ್ಯುಲೆನ್ಸ್ ಕರೆದು ಇಬ್ಬರು ಕುಟುಂಬಸ್ಥರೊಂದಿಗೆ ಘಟನಾ ಸ್ಥಳಕ್ಕೆ ತಂದೆ ಹೆಲರಾಮ್ ತಲುಪಿದ್ದರು. ಶನಿವಾರ ಮುಂಜಾನೆಯಿಂದ ಹುಡುಕಾಟ ಶುರುವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಲ್ಲಾ ಆಸ್ಪತ್ರೆಗಳಲ್ಲಿ ಹುಡುಕಾಡಿದರೂ ಮಗನ ಸುಳಿವಿಲ್ಲ. ಅಧಿಕಾರಿಗಳು ಮಗ ಮೃತಪಟ್ಟಿದ್ದಾನೆ. ಹೀಗಾಗಿ ಶವಗಾರದಲ್ಲಿ ಹುಡುಕಾಡಲು ಸೂಚಿಸಿದ್ದಾರೆ.
ಬಹನಗದ ಸರ್ಕಾರಿ ಶಾಲೆಯಯನ್ನು ತಾತ್ಕಾಲಿಕ ಶವಗಾರವಾಗಿ ಮಾಡಲಾಗಿತ್ತು. ರೈಲು ದುರಂತದಲ್ಲಿ ಮೃತಪಟ್ಟವರನ್ನು ಇದೇ ಶವಗಾರಕ್ಕೆ ಸಾಗಿಸಲಾಗಿತ್ತು. ತ್ವರಿತ ಕಾರ್ಯಾಚರಣೆಯಲ್ಲಿ ಪ್ರಜ್ಞಾಹೀನನಾಗಿದ್ದ ಬಿಸ್ವಜಿತ್ ಮಲಿಕ್ನನ್ನು ರಕ್ಷಣಾ ಸಿಬ್ಬಂದಿಗಳು ಶವಗಾರಕ್ಕೆ ಕಳುಹಿಸಿದ್ದಾರೆ. ಶವಗಾರದಲ್ಲಿ ಶವಗಳ ರಾಶಿ ನಡುವೆ ಬಿಸ್ವಜಿತ್ ಮಲಿಕ್ ಬಿದ್ದಿದ್ದ. ಆದರೆ ಸಾರ್ವಜನಿಕರಿಗೆ ಈ ಶವಗಾರಕ್ಕೆ ಪ್ರವೇಶ ಇರಲಿಲ್ಲ.
ನಡೆದ ಘಟನೆ ವಿವರಿಸಿದ ತಂದೆ ಹೆಲರಾಮ್ ಒಂದು ಸಾರಿ ಹುಡುಕಾಡುವುದಾಗಿ ಮನವಿ ಮಾಡಿದ್ದಾರೆ. ಬಳಿಕ ಒಳ ಪ್ರವೇಶಿಸಿದ ತಂದೆಯ ಜಂಗಾಬಲವೇ ಉಡುಗಿ ಹೋಗಿದೆ. ಶವಗಳ ರಾಶಿ, ತನ್ನ ಮಗ ಬದುಕಿದ್ದಾನೆ ಅನ್ನೋ ವಿಶ್ವಾಸದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ್ದ ತಂದೆ ಶವಗಳ ರಾಶಿಯಲ್ಲಿ ಮಗನ ಹುಡುಕಾಟ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ಹುಡುಕಾಟ ಶುರುವಾದರೂ ಪತ್ತೆ ಇಲ್ಲ. ಶವಾಗಾರದ ಕೋಣೆಯ ಮೂಲೆಯೊಂದರಲ್ಲಿ ಕೈಯ ಚಲನೆಯೊಂದನ್ನು ತಂದೆ ಗಮನಿಸಿದ್ದಾರೆ. ತಕ್ಷಣವೇ ಓಡಿದ್ದಾರೆ. ಹತ್ತಿರ ಬರುತ್ತಿದ್ದಂತೆ ತಂದೆಗೆ ಇದು ತನ್ನ ಮಗನ ಕೈಯೆಂದು ಖಚಿತಗೊಂಡಿದೆ. ಇತರ ಶವಗಳನ್ನು ಪಕ್ಕಕ್ಕೆ ಸರಿಸಿದಾಗ ಊಹೆ ನೀಡವಾಗಿದೆ. ಬಿಸ್ವಜಿತ್ ಮಲಿಕ್ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ.
ಶವಗಾರದಿಂದ ಬಿಸ್ವಜಿತ್ ಮಲಿಕ್ ಹೊರತಂದ ತಂದೆ, ತಾವು ಆಗಮಿಸಿದ ಅದೇ ಆಂಬ್ಯುಲೆನ್ಸ್ನಲ್ಲಿ ಬಾಲಾಸೋರ್ ಆಸ್ಪತ್ರೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಕಾರಣ ಕಟಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಕೋಲ್ಕತಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಸ್ವಜಿತ್ಗೆ ಎರಡು ಸರ್ಜರಿ ಮಾಡಲಾಗಿದೆ. ಸದ್ಯ ಬಿಸ್ವಜಿತ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.








