ಸಮಗ್ರ ನ್ಯೂಸ್ : ಬಿಜೆಪಿ ಯುವ ಮೋರ್ಚಾ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ ಜಿಲ್ಲಾ ಪೊಲೀಸರು ಭಾನುವಾರ ಇಬ್ಬರನ್ನು ಬಂಧಿಸಿದ್ದರು. ಇದೀಗ ಬಂಧಿತರನ್ನು ಬಿಗಿ ಬಂದೋಬಸ್ತು ಮೂಲಕ ಪಿಎಫ್ಐ ಕಚೇರಿಗೆ ಕರೆದುಕೊಂಡು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಸುಳ್ಯ ಪೊಲೀಸರು ಮಹಜರು ಪ್ರಕ್ರಿಯೆ ನಡೆಸುತ್ತಿದ್ದು, ಬಳಿಕ ಇಬ್ಬರನ್ನೂ ಸುಳ್ಯದ ಗಾಂಧಿನಗರದ ಅಲೆಟ್ಟಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಬಂಧಿತರಾಗಿರುವ ಅಬೀದ್ ಮತ್ತು ನೌಫಾಲ್ ಅವರನ್ನು ಸುಳ್ಯದ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ಕಛೇರಿಯಲ್ಲಿ ಮಹಜರು ಪ್ರಕ್ರಿಯೆಗೆ ಒಳಪಡಿಸುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎಡಿಜಿಪಿ ಅಲೋಕ್ ಕುಮಾರ್ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳನ್ನು ಸ್ಥಳಕ್ಕೆ ಮಹಜರು ಮಾಡುವುದಕ್ಕೆ ಕರೆದುಕೊಂಡು ಬಂದಾಗ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ಕರೆ ತರಲಾಗಿತ್ತು. ಈ ಪ್ರಕರಣವು ಜಾಮೀನು ರಹಿತ ಎಂದು ಹೇಳಲಾಗುತ್ತಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.






