ಸಮಗ್ರ ನ್ಯೂಸ್: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್ಪಿಐ) ಭಾರತದ ಮಾರುಕಟ್ಟೆಯಿಂದ ನಿರಂತರವಾಗಿ ಬಂಡವಾಳ ಹಿಂದಕ್ಕೆ ಪಡೆಯುತ್ತಲೇ ಇದ್ದು, ಬಂಡವಾಳ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.
ಮೇ 2 ರಿಂದ 13ರವರೆಗಿನ ಅವಧಿಯಲ್ಲಿ ಷೇರುಪೇಟೆಯಿಂದ ₹ 25,200 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಡ್ಡಿದರ ಹೆಚ್ಚಳ ಆಗಿರುವುದು ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ.
‘ಕಚ್ಚಾ ತೈಲ ದರ ಗರಿಷ್ಠ ಮಟ್ಟದಲ್ಲಿ ಇರುವುದು, ಹಣದುಬ್ಬರ ಏರಿಕೆ, ಕೇಂದ್ರೀಯ ಬ್ಯಾಂಕ್ಗಳು ಹಣಕಾಸು ನೀತಿಯನ್ನು ಬಿಗಿಗೊಳಿಸುತ್ತಿರುವುದು ಷೇರುಪೇಟೆಯ ಮೇಲೆ ಪರಿಣಾಮ ಉಂಟುಮಾಡುತ್ತಿವೆ. ಅಲ್ಲದೆ, ಜಾಗತಿಕವಾಗಿ ಹಣದುಬ್ಬರವು ಭಾರಿ ಏರಿಕೆ ಕಾಣುತ್ತಿರುವುದರಿಂದ ಹೂಡಿಕೆದಾರರು ಆರ್ಥಿಕ ಬೆಳವಣಿಯ ಬಗ್ಗೆ ಆತಂಕ ಹೊಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಲ್ಪಾವಧಿಯಲ್ಲಿ ಎಫ್ಪಿಐ ಒಳಹರಿವು ಅಸ್ಥಿರವಾಗಿರಲಿದೆ’ ಎಂದು ಕೋಟಕ್ ಸೆಕ್ಯುರಿಟೀಸ್ನ ಈಕ್ವಿಟಿ ರಿಸರ್ಚ್ನ ಮುಖ್ಯಸ್ಥ ಶ್ರೀಕಾಂತ್ ಚೌಹಾಣ್ ಹೇಳಿದ್ದಾರೆ.
2022ರ ಏಪ್ರಿಲ್ವರೆಗೆ ನಿರಂತರವಾಗಿ ಏಳನೇ ತಿಂಗಳಿನಲ್ಲಿಯೂ ಮಾರಾಟಕ್ಕೆ ಗಮನ ನೀಡಿದ್ದಾರೆ. ಷೇರುಪೇಟೆಯಿಂದ ಒಟ್ಟಾರೆ ₹ 1.65 ಲಕ್ಷ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಮೇ 2 ರಿಂದ 13ರವರೆಗಿನ ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಿಂದಲೂ ₹ 4,342 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.
ಪ್ರವರ್ಧಮಾನಕ್ಕೆ ಬರುತ್ತಿರುವ ತೈವಾನ್, ದಕ್ಷಿಣ ಕೊರಿಯಾ ಮತ್ತು ಪಿಲಿಪ್ಪೀನ್ಸ್ ಮಾರುಕಟ್ಟೆಗಳಿಂದಲೂ ಮೇನಲ್ಲಿ ಬಂಡವಾಳ ಹೊರಹರಿವು ಕಂಡುಬಂದಿದೆ.
ಇದರ ಜೊತೆಗೆ ಹಣದುಬ್ಬರವೂ ಏರಿಕೆಯಾಗುತ್ತಿದ್ದು, ದಿನೋಪಯೋಗಿ ಸಾಮಗ್ರಿಗಳ ಬೆಲೆಯಲ್ಲಿ ಬಾರೀ ಏರಿಕೆಯಾಗಿದೆ. ಅವ್ಯಾಹತವಾಗಿ ಬೆಲೆ ಏರಿಕೆಯಿಂದ ಸಾರ್ವಜನಿಕರು ಹಿಂದೆಂದೂ ಕಾಣದ ಹೊರೆಯನ್ನು ಅನುಭವಿಸುತ್ತಿದ್ದಾರೆ. ಕೋಟಿಗಟ್ಟಲೆ ಜನರು ನರಳುತ್ತಿದ್ದಾರೆ ಮತ್ತು ಹಸಿವಿನ ಸಂಕಟದಿಂದ ಕಡು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಅಭೂತಪೂರ್ವ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ಮೇಲೆ ಬರುತ್ತಿರುವ ಇದು ಜನರ ಸಂಕಟಗಳನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಕಳೆದ ವರ್ಷ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಶೇ.70, ತರಕಾರಿಗಳ ಶೇ.20, ಅಡುಗೆ ಎಣ್ಣೆ ಶೇ. 23 ಮತ್ತು ಬೇಳೆಕಾಳುಗಳ ಬೆಲೆ ಶೇ.8ರಷ್ಟು ಹೆಚ್ಚಾಗಿದೆ. ಕೋಟಿಗಟ್ಟಲೆ ಭಾರತೀಯರ ಪ್ರಧಾನ ಆಹಾರವಾಗಿರುವ ಗೋಧಿ ಶೇ. 14ಕ್ಕೂ ಹೆಚ್ಚು ಬೆಲೆ ಏರಿಕೆ ಕಾಣುತ್ತಿದ್ದು, ಅದು ಕೈಗೆಟುಕದಂತಾಗುತ್ತಿದೆ. ಗೋಧಿ ಸಂಗ್ರಹಣೆ ಕುಸಿದಿದೆ.







