ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬವೂ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಅಂತಹ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಅತ್ಯಂತ ಮುಖ್ಯವಾದುದು. ಭಾದ್ರಪದ ಮಾಸದಲ್ಲಿ ಬರುವ ಮೊದಲ ಹಬ್ಬವೇ ಗೌರಿಹಬ್ಬ. ಈ ಗೌರಿ ಹಬ್ಬದ ಆಚರಣೆಗೆ ಕಥೆಗಳಿವೆ.
ಬಂಧು ಬಾಂಧವರನ್ನು ಭಾವೈಕ್ಯತೆಯನ್ನು ಗಟ್ಟಿಗೊಳಿಸುವುದು ಈ ಹಬ್ಬದ ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ಉಡುಗೊರೆಯನ್ನು ಪಡೆದುಕೊಳ್ಳುವುದು. ಹೆತ್ತವರು ಒಡ ಹುಟ್ಟಿದವರು ಚೆನ್ನಾಗಿರಲಿ ಎಂದು ಹಾರೈಸುವುದು ಗೌರಿ ಹಬ್ಬದ ಮಹತ್ವವಾಗಿದೆ. ಗೌರಿಗೆ ಸ್ವರ್ಣಗೌರಿ ಎಂಬ ಹೆಸರು ಬಂದಿದ್ದು ಶಿವನಿಂದ.
ಒಮ್ಮೆ ಶಿವ ಕೈಲಾಸದಲ್ಲಿ ಕುಳಿತಿರುವಾಗ ಪಾರ್ವತಿ ಬಂದು ಶಿವನ ಕಣ್ಣುಗಳನ್ನು ಮುಚ್ಚುತ್ತಾಳೆ. ನಂತರ ಶಿವ ಕಣ್ಣು ತೆರೆದು ನೋಡಿದಾಗ ಪಾರ್ವತಿಯು ಕಪ್ಪಾಗಿ ಕಾಣುತ್ತಾಳೆ. ಆಗ ಶಿವನು ಪಾರ್ವತಿಯನ್ನು ಗೌರಿ ಎಂದು ಕರೆಯುತ್ತಾನೆ. ಸಂಸ್ಕೃತದಲ್ಲಿ ಗೌರಿ ಎಂದರೆ ಕಪ್ಪು ಎಂಬರ್ಥ. ಶಿವ ಗೌರಿ ಎಂದು ಕರೆದಿದ್ದರಿಂದ ಪಾರ್ವತಿ ಮುನಿಸಿಕೊಂಡು ಹೋಗುತ್ತಾಳೆ.
ಮುನಿಸಿಕೊಂಡ ಪಾರ್ವತಿಯನ್ನು ಓಲೈಸುವುದಕ್ಕಾಗಿ ಪರಮೇಶ್ವರನು ಗೌರಿಗೆ ಹೇಳುತ್ತಾನೆ. ನೀನು ಗೌರಿ ಅಲ್ಲ. ಸ್ವರ್ಣಗೌರಿ ಎಂದು ಕರೆದ. ಸ್ವರ್ಣ ಎಂದರೆ ಚಿನ್ನ ಎಂದರ್ಥ. ಆದ್ದರಿಂದ ಶಿವನು ಸ್ವರ್ಣಗೌರಿ ಎಂದು ಪಾರ್ವತಿಯನ್ನು ಓಲೈಸುತ್ತಾನೆ.
ಗೌರಿ ಹಬ್ಬವೆಂದರೆ ಹೆಣ್ಣು ಮಕ್ಕಳಿಗೆ ಬಹಳ ಸಂತಸ. ಅದರಲ್ಲೂ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಖುಷಿ ಸ್ವರ್ಗಕ್ಕೆ ಮೂರೇ ಗೇಣು. ಗೌರಿ ಹಬ್ಬ ಹೆಣ್ಣು ಮಕ್ಕಳಿಗೆ ವಿಶೇಷವಾದುದು. ವರ್ಷಕ್ಕೊಮ್ಮೆ ತವರಿಗೆ ಹೋಗಿ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಡನೆ ಹಬ್ಬವನ್ನು ಆಚರಿಸಿ ಬಾಗಿನ ತರುವುದೇ ಅವರಿಗೆ ಸಂಭ್ರಮ.
ಗೌರಿಹಬ್ಬ ಹೆಣ್ಣು ಮಕ್ಕಳು ಹುಟ್ಟಿದ ಮನೆ ಮತ್ತು ಕೊಟ್ಟ ಮನೆಯ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ಎಷ್ಟೇ ಬಡ ಕುಟುಂಬದವರಾದರೂ ಸಹ ಈ ಗೌರಿ ಹಬ್ಬವನ್ನು ಆಚರಿಸುವ ಮೂಲಕ ತಮ್ಮ ಹೆಣ್ಣು ಮಕ್ಕಳನ್ನು ತವರಿಗೆ ಕರೆದು ಬಾಗಿನ ಕೊಡುವ ಸಂಪ್ರದಾಯವಿದೆ. ಇನ್ನೂ ಕೆಲವೆಡೆ ಗೌರಿ ಹಬ್ಬದಲ್ಲಿ ನಮ್ಮ ಜೀವನಾಡಿಯಾಗಿರುವ ತುಂಬಿದ ಕೆರೆ, ಕಟ್ಟೆ, ನದಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗಂಗಾಮಾತೆಗೆ ಬಾಗಿನ ಅರ್ಪಿಸುವ ವಾಡಿಕೆ ಇದೆ.
ನಂತರ ಕೆರೆಯ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವೂ ಇದೆ. ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನವನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದ ಮರುದಿನ ಗಂಡು ಮಕ್ಕಳು ಗಣೇಶನ ಹಬ್ಬಕ್ಕೆ ಸಜ್ಜಾಗುತ್ತಾರೆ.
ನಮ್ಮಲ್ಲಿ ಯಾವುದೇ ಸಮಾರಂಭ ಹಾಗೂ ಶುಭಾರಂಭಗಳಲ್ಲಿ ಮೊದಲಿಗೆ ವಿಘ್ನಗಳ ನಿವಾರಕ ವಿನಾಯಕನನ್ನು ಪೂಜಿಸುವುದು ಪದ್ಧತಿ. ಯಾವುದೇ ಒಂದು ಶುಭ ಕೆಲಸಗಳನ್ನು ಕೈಗೊಳ್ಳಬೇಕಾದರೆ ಜನರು ವಿಘ್ನೇಶ್ವರನನ್ನು ಆರಾಧಿಸಿ ನಂತರ ಪ್ರಾರಂಭಿಸುತ್ತಾರೆ. ಗೌರಿಗಣೇಶ ಹಬ್ಬವನ್ನು ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಾರೆ.
ನಂತರ ಕೆರೆಯ ಮಣ್ಣಿನಲ್ಲಿ ಗಣೇಶ ಮೂರ್ತಿ ತಯಾರಿಸಿ ಮೆರವಣಿಗೆಯಲ್ಲಿ ತಂದು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವೂ ಇದೆ. ಗೌರಿ ಹಬ್ಬದಂದು ಹೆಣ್ಣು ಮಕ್ಕಳು ಸಡಗರದಿಂದ ಗೌರಿಗೆ ಪೂಜೆ ಸಲ್ಲಿಸಿ, ಗೌರಿದಾರ ಕಟ್ಟಿಸಿಕೊಂಡು ತಾಯಿಯ ಕಾಲಿಗೆ ನಮಸ್ಕರಿಸಿ ಮುತ್ತೈದೆಯರಿಗೆ ಬಾಗಿನವನ್ನು ನೀಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಗೌರಿಹಬ್ಬದ ಮರುದಿನ ಗಂಡು ಮಕ್ಕಳು ಗಣೇಶನ ಹಬ್ಬಕ್ಕೆ ಸಜ್ಜಾಗುತ್ತಾರೆ.
ಸ್ವರ್ಣಗೌರಿ ವ್ರತವನ್ನು ಮಾಡುವುದರಿಂದ ವ್ರತ ಮಾಡುವವರಿಗೆ ಗೌರಿಯು ಸಂಪತ್ತನ್ನು ಅನುಗ್ರಹಿಸುತ್ತಾಳೆ. ಸದಾ ಅವರ ಮನೆಯಲ್ಲಿ ಸಂಪತ್ತು ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಗೌರಿ-ಗಣೇಶ ಹಬ್ಬ ಎಂದಾಕ್ಷಣ ಚಿಕ್ಕ ಮಕ್ಕಳಿಂದ ದೊಡ್ಡವರಿಗೂ ಏನೋ ಸಂತೋಷ, ಸಡಗರ. ವಯಸ್ಸಿನ ಮಿತಿಯಿಲ್ಲದೆ ಎಲ್ಲರೂ ಒಗ್ಗೂಡಿ ಸಂಭ್ರಮ, ಸಡಗರದಿಂದ ಗೌರಿ-ಗಣೇಶ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಇದು ಯಾವುದೇ ಭಾಷೆ, ಧರ್ಮ, ಜಾತಿ, ಪ್ರದೇಶ ಎಂಬ ಬೇಧವಿಲ್ಲದೆ ಎಲ್ಲರೂ ಜೊತೆಗೂಡಿ ಆಚರಿಸಲಾಗುತ್ತದೆ






