ಸಮಗ್ರ ನ್ಯೂಸ್ : ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ, ದುರ್ಗದಹಳ್ಳಿ ಸಮೀಪ ನಡೆದಿದೆ.
ದುರ್ಗದಹಳ್ಳಿ ಗ್ರಾಮದ ಹಲಗಡ್ಕ ನಿವಾಸಿ ರಾಜೇಶ್ ಕಾಡುಕೋಣದಿಂದ ದಾಳಿಗೊಳಗಾದ ರೈತ. ತನ್ನ ಜಮೀನಿನಲ್ಲಿ ಇದ್ದಾಗ ಕಾಡುಕೋಣವೊಂದು ರಾಜೇಶ್ ಮೇಲೆ ದಾಳಿ ನಡೆಸಿದ್ದು, ಕಾಡುಕೋಣ ದಾಳಿಯಿಂದ ರಾಜೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾಡುಕೋಣದ ತಿವಿತದಿಂದ ರಾಜೇಶ್ ಅವರ ತಲೆ, ಹೊಟ್ಟೆ ಮತ್ತು ಕಾಲಿನ ಭಾಗಕ್ಕೆ ತೀವ್ರವಾಗ ಪೆಟ್ಟಾಗಿದೆ. ತಲೆ ಮತ್ತು ಹೊಟ್ಟೆ ಭಾಗದಲ್ಲಿ ಆಳವಾದ ಗಾಯಗಳಾಗಿವೆ. ಕೊಂಬಿನ ಮೇಲಿರಿಸಿ ಸುಮಾರು ದೂರ ಎಳೆದೊಯ್ದಿತ್ತು ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಜೇಶ್ ಅವರನ್ನು ಸ್ಥಳೀಯರು ಕಳಸ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆಯ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಅಲ್ಲಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು, ಕಳೆದ ಕೆಲ ದಿನಗಳ ಹಿಂದೆ ಜಾವಳಿ ಸಮೀಪದ ಮೂವರ ಮೇಲೆ ಕಾಡುಕೋಣಗಳು ದಾಳಿ ನಡೆಸಿ ಗಾಯಗೊಳಿಸಿದ್ದವು. ಕಾಡುಕೋಣಗಳ ಹಾವಳಿಯಿಂದಾಗಿ ಜನರು ಕಾರ್ಮಿಕರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.







