ಆರೋಗ್ಯ ಸಮಾಚಾರ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ, ಈ ಬಗ್ಗೆ ವೈದ್ಯರು ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಇಲ್ಲಿ ತಿಳಿಸಿದ್ದಾರೆ.
ಬದಲಾದ ಆಹಾರ ಕ್ರಮ, ಜೀವನಶೈಲಿಯಿಂದಾಗಿ ಮನುಷ್ಯನಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಕಾಮನ್ ಎಂಬಂತಾಗಿದೆ. ಪ್ರತಿಯೊಬ್ಬರೂ ಆಗಾಗ ನಂಗೆ ಗ್ಯಾಸ್ಟ್ರಿಕ್ ಸಮಸ್ಯೆ ಅಂತಾ ಹೇಳಿಕೊಳ್ತಿರ್ತಾರೆ. ಸಣ್ಣ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಹಲವರು ನಿರ್ಲಕ್ಷಿಸುವುದೂ ಉಂಟು.
ಕೆಲವೊಮ್ಮೆ ಎದೆಯಲ್ಲಿ ನೋವು ಕಾಣಿಸಿಕೊಂಡರೆ, ಅದು ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಕೆಲವರು ನಿರ್ಲಕ್ಷಿಸುತ್ತಾರೆ. ಕೆಲವೊಮ್ಮೆ ನಿರಂತರ ಎದೆನೋವನ್ನು ಹಾಗೆ ನೆಗ್ಲೆಕ್ಟ್ ಮಾಡುವುದು ಸರಿಯಲ್ಲ. ಇದರಿಂದ ನಮ್ಮ ದೇಹದ ಪ್ರಮುಖ ಅಂಗವನ್ನು ಹಾನಿಗೊಳಿಸಿದಂತಾಗುತ್ತೆ.
ಈತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ವಯೋಮಾನದವರು ಈ ಕಾಯಿಲೆಗೆ ತುತ್ತಾಗುತ್ತಿರುವುದು ಆತಂಕ ಮೂಡಿಸಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆಸ್ಪಿರಿನ್ ಮಾತ್ರೆ ನಿಮ್ಮ ಜೇಬಲ್ಲಿರಲಿ
ಆಸ್ಪಿರಿನ್ ಮಾತ್ರೆಯನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡಿರಿ ಎಂದು ಡಾ.ಫರ್ನಾಂಡಿಸ್ ತಿಳಿಸಿದ್ದಾರೆ. ಹಠಾತ್ ಎದೆನೋವು ಅಥವಾ ಕುತ್ತಿಗೆ, ಎಡಗೈ ಭಾಗದಲ್ಲಿ ತೊಂದರೆ ಕಾಣಿಸಿಕೊಂಡರೆ ಈ ಮಾತ್ರೆಯನ್ನು ಸೇವಿಸಿ. ಎದೆ ನೋವನ್ನು ಗ್ಯಾಸ್ಟ್ರಿಕ್ ಸಮಸ್ಯೆ ಅಂತಾ ನಿರ್ಲಕ್ಷಿಸಬೇಡಿ ಎಂದು ಹೇಳಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಅನೇಕರು ಡಾ.ಫರ್ನಾಂಡಿಸ್ ಅವರಿಗೆ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಅದಕ್ಕೆ ವೈದ್ಯರು ಸಹ ಸೂಕ್ತ ರೀತಿಯಲ್ಲಿ ಆರೋಗ್ಯ ಸಲಹೆಗಳನ್ನು ನೀಡಿದ್ದಾರೆ.
“ನಮ್ಮ ಕುಟುಂಬದಲ್ಲಿ ಅನೇಕರಿಗೆ ಹೃದಯಾಘಾತವಾಗಿದೆ.. ನನಗೆ ಆಗಾಗ ಎಡಗೈ ನೋವು ಬರುತ್ತೆ”
ನಮ್ಮ ಕುಟುಂಬದಲ್ಲಿ ಅನೇಕರಿಗೆ ಹೃದಯಾಘಾತವಾಗಿದೆ (Heart Attack). ನನಗೆ ಆಗಾಗ ಎಡಗೈ ನೋವು ಬರುತ್ತೆ. ನಂತರ ಸರಿಯಾಗುತ್ತೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಆಸ್ಪಿರಿನ್ ಮಾತ್ರೆ ಹೊಂದಿರಬೇಕೆ ಎಂದು ವ್ಯಕ್ತಿಯೊಬ್ಬ ವೈದ್ಯರಲ್ಲಿ ಪ್ರಶ್ನಿಸಿದ್ದಾರೆ.
ನೀವು ಪರೀಕ್ಷೆಗೆ ಒಳಗಾಗುವುದು ಒಳಿತು. ದಯವಿಟ್ಟು ನಿರ್ಲಕ್ಷಿಸಬೇಡಿ ಮತ್ತು ಸಮಗ್ರ ಪರೀಕ್ಷೆಗಳನ್ನು ಮಾಡಿ. ನೀವು ಉತ್ತಮ ವೈದ್ಯರ ಸಂಪರ್ಕದಲ್ಲಿದ್ದರೆ ಅವರೊಂದಿಗೆ ಸಮಾಲೋಚಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮಹಿಳೆಯರಿಗೂ ಇದೇ ರೋಗಲಕ್ಷಣ ಅನ್ವಯಿಸುತ್ತದೆಯೇ?
ಮಹಿಳೆಯರಿಗೂ ಇದೇ ರೋಗಲಕ್ಷಣ ಅನ್ವಯಿಸುತ್ತದೆಯೇ ಎಂದು ಒಬ್ಬರು ವೈದ್ಯರನ್ನು ಕೇಳಿದ್ದಾರೆ. “ಹೌದು..” ಎಂದು ವೈದ್ಯರು ಪ್ರತಿಯಾಗಿ ಉತ್ತರಿಸಿದ್ದಾರೆ.
ಹೃದಯಾಘಾತದ ಲಕ್ಷಣಗಳಿವು
ಹೃದಯಾಘಾತದ ಸಾಮಾನ್ಯ ಲಕ್ಷಣಗಳೆಂದರೆ ಕುತ್ತಿಗೆ, ಭುಜ, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗ ನೋವು, ಉಸಿರಾಟದ ತೊಂದರೆ, ತೋಳಿನಲ್ಲಿ ನೋವು, ವಾಕರಿಕೆ, ವಾಂತಿ, ಬೆವರು, ತಲೆತಿರುಗುವಿಕೆ, ಅಸಾಮಾನ್ಯ ಆಯಾಸ ಮತ್ತು ಅಜೀರ್ಣ.






