ಸಮಗ್ರ ನ್ಯೂಸ್: ಮಹಾಮಳೆಗೆ ಬೆಂಗಳೂರಿನ ರಸ್ತೆಗಳು ಕೆರೆಯಂತಾಗಿವೆ. ಇದರಿಂದಾಗಿ ಅಗತ್ಯ ಸಂದರ್ಭಗಳಲ್ಲಿ ವಾಹನ ಸವಾರರಿಗೆ ದಾರಿ ತೋರಿಸಬೇಕಾದ ಗೂಗಲ್ ಮ್ಯಾಪ್ ಈಗ ಸವಾರರ ದಿಕ್ಕು ತಪ್ಪಿಸುತ್ತಿದೆ.
ಬೆಂಗಳೂರಿನ ನಿವಾಸಿಯೊಬ್ಬರು ಜೆ ಪಿ ನಗರದಿಂದ ಹೊಸೂರಿನವರೆಗಿನ ಮಾರ್ಗಕ್ಕಾಗಿ ಗೂಗಲ್ ಮ್ಯಾಪ್ನಲ್ಲಿ ದಾರಿಯನ್ನು ಸರ್ಚ್ ಮಾಡಿದ್ದಾರೆ. ಆದರೆ, ಬೆಂಗಳೂರು ನಗರದ ರಸ್ತೆಗಳು ಜಲಾವೃತಗೊಂಡಿರುವ ಕಾರಣ ಕೆಲ ಮಾರ್ಗಗಳನ್ನು ಗೂಗಲ್ ಮ್ಯಾಪ್ ತೋರಿಸುತ್ತಿಲ್ಲ.
ಭಾರೀ ಮಳೆಯಿಂದಾಗಿ ಬೆಂಗಳೂರಿನ ಸ್ಥಿತಿ ಸಿಕ್ಕಾಪಟ್ಟೆ ಹದಗೆಟ್ಟಿದೆ. ಯಾವ ರಸ್ತೆ ಜಲಾವೃತವಾಗಿದೆ, ಯಾವ ರಸ್ತೆಯಲ್ಲಿ ಸಂಚರಿಸಿದರೆ ಮುಂದಕ್ಕೆ ಹೋಗಬಹುದು ಎನ್ನುವ ಮಾಹಿತಿಯೇ ಲಭ್ಯವಿಲ್ಲವಾಗಿದೆ. ಕೆಲವು ರಸ್ತೆಗಳನ್ನು ನೀರು ನಿಂತ ಕಾರಣಕ್ಕೆ ಬ್ಲಾಕ್ ಮಾಡಲಾಗಿದೆ. ರಾಜಾಜಿನಗರದ ಒಳ ರಸ್ತೆಯಿಂದ ಮಹಾಕವಿ ಕುವೆಂಪು ರಸ್ತೆವರೆಗೆ ನಮೂದಿಸಿದರೆ ತಲುಪುವ ಸಮಯ ಮಾತ್ರ ತೋರಿಸುತ್ತಿದ್ದು, ಗೂಗಲ್ ಮ್ಯಾಪ್ ಯಾವುದೇ ಮಾರ್ಗವನ್ನು ತೋರಿಸುತ್ತಿಲ್ಲ.
ಈ ಕುರಿತು ರಾಜಾಜಿನಗರದಲ್ಲಿ ಹೊಸದಾಗಿ ಮನೆ ಮಾಡಿರುವ ನಿವಾಸಿ ಧರ್ಮ ಎನ್ನುವವರು ಮಾತನಾಡಿ, “ರಾಜಾಜಿನಗರದಿಂದ ಕುವೆಂಪು ರಸ್ತೆಗೆ ಹತ್ತಿರವಿರುವ ನನ್ನ ಕಚೇರಿಗೆ ತಲುಪಲು ಮ್ಯಾಪ್ ಹಾಕಿದೆ. ಆದರೆ, ಮಳೆಯಿಂದಾಗಿ ಎಲ್ಲಿ ಯಾವ ರಸ್ತೆಯ ಮುಖಾಂತರ ಹೋಗಬೇಕೆಂದು ಗೂಗಲ್ ಮ್ಯಾಪ್ಗೂ ತಿಳಿಯುತ್ತಿಲ್ಲ. ನಾವೆಂತಹ ಪರಿಸ್ಥಿತಿಗೆ ತಲುಪಿದ್ದೇವೆ ನೋಡಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೂಗಲ್ ಮ್ಯಾಪ್ ದಿಕ್ಕು ತಪ್ಪಿರುವುದರಿಂದ ಆಟೋ ಚಾಲಕರು, ಕ್ಯಾಬ್ ಚಾಲಕರು ಅತಿ ಹೆಚ್ಚು ತೊಂದರೆಗೊಳಗಾಗಿದ್ದಾರೆ. ಅನಿವಾರ್ಯವಾಗಿ ಗೂಗಲ್ ಮ್ಯಾಪ್ ಬಳಸುತ್ತಿದ್ದ ವಾಹನ ಸವಾರರು ಕೂಡ ಕಂಗಾಲಾಗಿದ್ದಾರೆ. ಏನೇ ಆದರೂ ಮಹಾ ಮಳೆಗೆ ವಾಹನ ಸವಾರರಿಗೆ ಸರಿಯಾದ ದಾರಿ ತೋರಿಸಬೇಕಾಗಿದ್ದ ಗೂಗಲ್ ಮ್ಯಾಪ್ ದಿಕ್ಕು ತಪ್ಪಿ ಅದನ್ನು ಅವಲಂಬಿಸಿದ್ದವರನ್ನೂ ದಿಕ್ಕು ತಪ್ಪಿಸುತ್ತಿದೆ.






