ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳ ಪರಿವರ್ತನೆ ಪ್ರಕ್ರಿಯೆಗೆ ಬ್ರೇಕ್‌ ಹಾಕಿದ ಸರ್ಕಾರ

ಸಮಗ್ರ ನ್ಯೂಸ್: ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರ ಅಂತ್ಯೋದಯ, ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬ್ರೇಕ್‌ ನೀಡಿದೆ.

Ad Widget ... ..

ಅಂತ್ಯೋದಯ, ಬಿಪಿಎಲ್‌ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದು ಬಡವರ ʼಅನ್ನಭಾಗ್ಯʼಕ್ಕೆ ಕನ್ನ ಹಾಕಿದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ಆರಂಭಿಸಿತ್ತು. ಅನರ್ಹ ಪಡಿತರ ಚೀಟಿಗಳನ್ನು ಎಪಿಎಲ್‌ಗೆ ಪರಿವರ್ತಿಸುವ ಪ್ರಕ್ರಿಯೆ ನಡೆಸಿತ್ತು.

Ad Widget

ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿದವರು, 1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಮತ್ತು ನಾಲ್ಕು ಚಕ್ರದ ವೈಯಕ್ತಿಕ ವಾಹನ ಇರುವವರು ಅಂತ್ಯೋದಯ ಅಥವಾ ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಅರ್ಹರಲ್ಲ ಎಂದು ಇಲಾಖೆ ಪಟ್ಟಿ ಮಾಡಿತ್ತು.

ಈ ಸಂಬಂಧ ಕ್ರಮ ಕೈಗೊಳ್ಳಲು ಎಲ್ಲ ಡಿಸಿಗಳು ಮತ್ತು ಇಲಾಖೆ ಜಂಟಿ/ಉಪನಿರ್ದೇಶಕರಿಗೂ ಈ ಹಿಂದೆ ಆಹಾರ ಇಲಾಖೆ ಸೂಚನೆ ನೀಡಿತ್ತು. ಆದರೆ ನಾಲ್ಕು ಚಕ್ರದ ಸ್ವಂತ ವಾಹನ ಹೊಂದಿದವರನ್ನು ಅನರ್ಹ ಪಟ್ಟಿಗೆ ಸೇರಿಸಿರುವುದಕ್ಕೆ ಸರ್ಕಾರ ಹಾಗೂ ಪಕ್ಷದವರಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಆದೇಶ ವಾಪಸ್‌ ತೆಗೆದುಕೊಳ್ಳಲು ಸಿಎಂ ಮೇಲೆ ಒತ್ತಡ ಕೂಡ ಹೇರಲಾಗಿತ್ತು.

ಇದೀಗ ತನ್ನ ಸುತ್ತೋಲೆಯನ್ನು ಮುಂದಿನ ಆದೇಶದವರೆಗೆ ಆಹಾರ ಇಲಾಖೆ ತಡೆ ಹಿಡಿದಿದೆ. ಆ ಸಂಬಂಧ ಆದೇಶವನ್ನು ಹೊರಡಿಸಿದೆ.

Leave a Comment

Your email address will not be published. Required fields are marked *