ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆನೆಗಳ ಹಾವಳಿ ಹೆಚ್ಚಾಗಿದ್ದು, ಸರಕಾರ ಮಂಗಳೂರು ಅರಣ್ಯ ವಿಭಾಗದಲ್ಲೂ “ಆನೆ ಕಾರ್ಯ ಪಡೆ’ ಮಂಜೂರು ಮಾಡಲಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸದನದ ಗಮನ ಸೆಳೆದ ಕಾಂಗ್ರೆಸ್ನ ಐವನ್ ಡಿ’ ಸೋಜಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅರಣ್ಯ ವಿಭಾಗದಲ್ಲಿ ಆನೆಗಳ ಸಂಘರ್ಷ ತಡೆಯಲು ಸರಕಾರ ಎಲಿಫೆಂಟ್ ಟಾಸ್ಕ್ಫೋರ್ಸ್ ರಚಿಸಿ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ರಾಜ್ಯದ ಮಾನವ ಆನೆ ಸಂಘರ್ಷ ಅತಿ ಹೆಚ್ಚಾಗಿರುವ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಕೂಡಗು, ಹುಣಸೂರು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ಹಾಗೂ ಬಂಡೀಪುರಗಳಲ್ಲಿ ಸರಕಾರದ ಆದೇಶದಂತೆ ಒಟ್ಟು 8 ಆನೆ ಕಾರ್ಯಪಡೆಗಳನ್ನು ರಚಿಸಲಾಗಿದೆ. ಈಗ ಮಂಗಳೂರು ಭಾಗಕ್ಕೂ ಹೆಚ್ಚುವರಿಯಾಗಿ ಒಂದು ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು







