ಬೆಂಗಳೂರಿನ ಲಾಡ್ಜ್ ನಲ್ಲಿ‌ ಸಾವನ್ನಪ್ಪಿದ ಪುತ್ತೂರಿನ ಯುವಕನ ಪ್ರಕರಣಕ್ಕೆ ರೋಚಕ ತಿರುವು| ಪೋಸ್ಟ್ ಮಾರ್ಟಂ ವರದಿಯಲ್ಲೇನಿದೆ ಗೊತ್ತಾ?

ಸಮಗ್ರ ನ್ಯೂಸ್: ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರು ಮೂಲದ ತಕ್ಷಿತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪ್ರಕರಣ ಹೊಸ ತಿರುವು ಪಡೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಮಡಿವಾಳ ಠಾಣೆಯ ಪೊಲೀಸರ ಕೈ ಸೇರಿದೆ.

Ad Widget ... ..

ಪುತ್ತೂರು ಮೂಲದ ತಕ್ಷಿತ್ ಸಾವಿನ ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಬೆಂಗಳೂರು ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತನಾಗಿದ್ದ ತಕ್ಷಿತ್ ಮರಣೋತ್ತರ ಶವ ಪರೀಕ್ಷೆಯ ವರದಿ ಪೊಲೀಸರ ಕೈಗೆ ಸೇರಿದೆ. ವರದಿಯ ಕೆಲವೊಂದು ಅಂಶಗಳು ಲಭ್ಯವಾಗಿದೆ.

Ad Widget

ತಕ್ಷಿತ್ ಮತ್ತು ಯುವತಿ ಸುಮಾರು 20 ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಪದೇ ಪದೇ ಲಾಡ್ಜ್ ಬದಲಾಯಿಸಿದ್ದರು. 8 ದಿನಗಳ ಹಿಂದೆ ಗ್ರ್ಯಾಂಡ್ ಚಾಯ್ಸ್ ಹೋಟೆಲ್‌ಗೆ ಬಂದಿದ್ದ ಇಬ್ಬರು ಎರಡು ಪ್ರತ್ಯೇಕ ಕೋಣೆಗಳನ್ನು ಪಡೆದುಕೊಂಡಿದ್ದರು. ಇದೀಗ ಮರಣೋತ್ತರ ಶವ ಪರೀಕ್ಷೆಯ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡುತ್ತಾ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿವೆ.

ಲಾಡ್ಜ್‌ನಲ್ಲಿಯೇ ಉಳಿದುಕೊಂಡಿದ್ದ ತಕ್ಷಿತ್ ಮತ್ತು ಅಕ್ಟೋಬರ್ 17ರಂದು ಆನ್‌ಲೈನ್ ಮೂಲಕ ಫುಡ್ ತರಿಸಿಕೊಂಡಿದ್ದರು. ಈ ಆಹಾರ ಸೇವನೆ ಬಳಿಕ ಇಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ಕೆಲವೊಂದು ಮಾತ್ರೆಗಳನ್ನು ತೆಗೆದುಕೊಂಡಿದ್ದರು. ನಂತರ ಯುವತಿ ರೂಮ್ ಚೆಕ್‌ಔಟ್ ಮಾಡಿ ಬೆಂಗಳೂರಿನಿಂದ ಊರಿಗೆ ತೆರಳಿದ್ದಳು. ಇತ್ತ ತಕ್ಷಿತ್ ಸಹ ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದನು.

ಕೊನೆ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿದ್ದ ತಕ್ಷಿತ್, ರಾತ್ರಿ ಯುವತಿಗೆ ಕರೆ ಮಾಡಿ ಲಾಡ್ಜ್‌ನಲ್ಲಿಯೇ ಉಳಿದುಕೊಳ್ಳೋದಾಗಿ ಹೇಳಿದ್ದನು. ಮರುದಿನ ಬೆಳಗ್ಗೆ ಯುವತಿ ಕರೆ ಮಾಡಿದಾಗ ತಕ್ಷಿತ್ ಕಾಲ್ ರಿಸೀವ್ ಮಾಡಿಲ್ಲ. ಲಾಡ್ಜ್ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೋಣೆಯ ಬಾಗಿಲು ತೆಗೆದಾಗ ಬೆಡ್‌ ಮೇಲೆ ತಕ್ಷಿತ್ ಮೃತದೇಹ ಪತ್ತೆಯಾಗಿತ್ತು. ಸಿಬ್ಬಂದಿ ತಕ್ಷಣವೇ ಮಡಿವಾಳ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಪೋಸ್ಟ್‌ ಮಾರ್ಟ್ಂ ವರದಿಯಲ್ಲಿ ತಕ್ಷಿತ್ ಸಾವಿಗೆ ಕಿಡ್ನಿ ವೈಫಲ್ಯ ಎಂಬ ಮಾಹಿತಿ ಇದೆ ಎಂದು ತಿಳಿದು ಬಂದಿದೆ. ಲಿವರ್ ಸಮಸ್ಯೆ ಹಾಗೂ ಅಸ್ತಮಾ ಕಾಯಿಲೆಯಿಂದ ತಕ್ಷಿತ್ ಬಳಲುತ್ತಿದ್ದ ಎಂಬುದರ ಬಗ್ಗೆಯೂ ತಿಳಿದು ಬಂದಿದೆ. ದಿಢೀರ್ ಕಿಡ್ನಿ ವೈಫಲ್ಯಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪೊಲೀಸರು ಎರಡು ದಿನಗಳಿಂದ ಯುವತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಫುಡ್ ಪಾಯಿಸನ್ ಅಗಿರುವ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಆನ್‌ಲೈನ್‌ನಿಂದ ಯಾವ ಫುಡ್ ಎಲ್ಲಿಂದ ಆರ್ಡರ್ ಮಾಡಿದ್ದರು? ನಂತರ ಇಬ್ಬರು ಸೇವಿಸಿದ ಮಾತ್ರೆಗಳೇನು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ತಕ್ಷಿತ್ ಅನಾರೋಗ್ಯದ ಬಗ್ಗೆ ಆತನ ಪೋಷಕರಿಗೆ ಮೊದಲೇ ಗೊತ್ತಿತ್ತಾ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದರು.

20 ದಿನಗಳಿಂದ ತಕ್ಷಿತ್ ಜೊತೆಯಲ್ಲಿದ್ದ ಯುವತಿ, ಆತನನ್ನು ಬಿಟ್ಟು ಊರಿಗೆ ಮರಳಿದ್ದೇಕೆ? ಇಬ್ಬರು ಬೆಂಗಳೂರಿಗೆ ಬಂದಿದ್ಯಾಕೆ? ಈ ವಿಷಯ ಇಬ್ಬರ ಪೋಷಕರಿಗೆ ತಿಳಿದಿತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ತಿಳಿದು ಬರಬೇಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಠಾಣೆಯ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *