ತಮಿಳುನಾಡಿನ‌ ಕರೂರ್ ನಲ್ಲಿ ಕಾಲ್ತುಳಿತ ಪ್ರಕರಣ| ಸಾವಿನ ಸಂಖ್ಯೆ 38ಕ್ಕೆ ಏರಿಕೆ| ಕಣ್ಣೀರು ಹಾಕಿದ ವಿಜಯ್ ದಳಪತಿ| ಪ್ರಧಾನಿ, ರಾಷ್ಟ್ರಪತಿ ಸೇರಿ ಹಲವರ ಸಂತಾಪ

ಸಮಗ್ರ ನ್ಯೂಸ್: ತಮಿಳು ನಟ ಹಾಗೂ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್‌ ತಮಿಳುನಾಡಿನ ಕರೂರಿನಲ್ಲಿ ಶನಿವಾರ ಕೈಗೊಂಡ ರ‍್ಯಾಲಿ ವೇಳೆ ಉಂಟಾದ ಕಾಲ್ತುಳಿತದಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ 50 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

Ad Widget ... ..

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಜಯ್‌, “ನನ್ನ ಹೃದಯವೇ ಒಡೆದು ಹೋಗಿದೆ. ಸಹಿಸಲಾಗದ, ಪದಗಳಲ್ಲಿ ಹೇಳಲು ಸಾಧ್ಯವಾಗದ ವೇದನೆ ಮತ್ತು ದುಃಖದಲ್ಲಿ ನಾನು ಮುಳುಗಿದ್ದೇನೆ,” ಎಂದು ಎಂದು ಹೇಳಿದ್ದಾರೆ.

Ad Widget

ಕರೂರಿನಲ್ಲಿ ಸಂಭವಿಸಿದ ದುರಂತದ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿರುವ ಅವರು, “ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನನ್ನ ಆತ್ಮೀಯ ಸಹೋದರ-ಸಹೋದರಿಯರ ಕುಟುಂಬಗಳಿಗೆ ನನ್ನ ಸಂತಾಪಗಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ,” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಿಕ್ಕಿರಿದು ಜಮಾಯಿಸಿದ್ದ ಅಭಿಮಾನಿಗಳ ನಡುವೆ ರ‍್ಯಾಲಿ ಸಾಗುವಾಗ ರಾತ್ರಿ 8 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದೇ ನೂಕುನುಗ್ಗಲಿಗೆ ಕಾರಣ ಎನ್ನಲಾಗಿದೆ. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಲ್ಲಿ ಟಿವಿಕೆ ಪಕ್ಷ ಸಿದ್ಧತೆ ಕೈಗೊಂಡಿತ್ತು. ಆದರೆ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರವೇ ಕಾಣುವಷ್ಟು ಜನರು ಜಮಾಯಿಸಿದ್ದರು. ಜನರು ನಟನನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು. ನಿಗದಿತ ಸಮಯಕ್ಕಿಂತಲೂ ವಿಜಯ್‌ ಸುಮಾರು 6 ಗಂಟೆ ತಡವಾಗಿ ಬಂದಿದ್ದು ಸಹ ಜನರ ಅಸಹನೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸೆಪ್ಟೆಂಬರ್‌ 13ರಿಂದ ಪ್ರತಿ ಶನಿವಾರ ಜನಸಂಪರ್ಕ ರ‍್ಯಾಲಿ ಆರಂಭಿಸಿದ್ದ ವಿಜಯ್‌, ಇದರ ಭಾಗವಾಗಿ ಶನಿವಾರ ಕರೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಪ್ರಚಾರಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬೃಹತ್‌ ವ್ಯಾನ್‌ ಮೇಲಿನಿಂದ ವಿಜಯ್‌ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಬಾಲಕಿಯೊಬ್ಬಳು ಕಾಣೆಯಾಗಿದ್ದರಿಂದ ಅವಳನ್ನು ಹುಡುಕುವ ನಿಟ್ಟಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ.

ಕಾಣೆಯಾದ ಬಾಲಕಿಯನ್ನು ಹುಡುಕಲು ನೆರವಾಗುವಂತೆ ವಿಜಯ್‌ ಮನವಿ ಮಾಡಿದರು. ಅಷ್ಟರಲ್ಲಿ ಜನಸಂದಣಿಯ ನಡುವೆ ನೂಕುನುಗ್ಗಲು ಉಂಟಾಗಿ ಮಹಿಳೆಯರು ಸೇರಿದಂತೆ ಹಲವರು ಉಸಿರುಗಟ್ಟಿ ಪ್ರಜ್ಞೆ ತಪ್ಪಿದರು. ಇದನ್ನು ಗಮನಿಸಿದ ವಿಜಯ್‌ ತಮ್ಮ ಭಾಷಣ ನಿಲ್ಲಿಸಿ, ವ್ಯಾನ್‌ ಮೇಲಿನಿಂದಲೇ ಕೆಳಗಿದ್ದವರತ್ತ ನೀರಿನ ಬಾಟಲ್‌ಗಳನ್ನು ಎಸೆದು ಉಪಚರಿಸಲು ಕೋರಿದರು. ಅಲ್ಲದೆ, ಅಸ್ವಸ್ಥರನ್ನು ಕರೆದೊಯ್ಯುತ್ತಿದ್ದ ಆಯಂಬುಲೆನ್ಸ್‌ಗೆ ದಾರಿ ಬಿಡುವಂತೆ ಮನವಿ ಮಾಡಿದರು. ಅಷ್ಟರಲ್ಲಿ ಮತ್ತಷ್ಟು ಜನರು ಉಸಿರುಗಟ್ಟಿ ಪ್ರಜ್ಞೆ ತಪ್ಪಿದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸುಮಾರು 20 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು. ಇನ್ನು ಕೆಲವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಘಟನೆಯ ಬಗ್ಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ನಟ ರಜನಿಕಾಂತ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸ್ಟಾಲಿನ್‌ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ತಡರಾತ್ರಿಯೇ ಕರೂರಿಗೆ ಭೇಟಿ ನೀಡಿರುವ ಅವರು ಮೃತರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಘಟನೆಯ ತಿಳಿದ ಕೂಡಲೇ ಸ್ಟಾಲಿನ್‌ ಬಾಧಿತರಿಗೆ ತಕ್ಷಣ ನೆರವು ಒದಗಿಸುವಂತೆ ಸಚಿವರಾದ ಸೆಂಥಿಲ್‌ ಬಾಲಾಜಿ, ಸುಬ್ರಮಣಿಯನ್‌, ಅಂಬಿಲ್‌ ಮಹೇಶ್‌ ಹಾಗೂ ಕರೂರು ಜಿಲ್ಲಾಧಿಕಾರಿಗೆ ಸೂಚಿಸಿದರು. ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ರಕ್ಷಣಾ ಕಾರ್ಯಕ್ಕೆ ಸಹಕರಿಸುವಂತೆ ಸೂಚಿಸಿದರು.

Leave a Comment

Your email address will not be published. Required fields are marked *