ಸಮಗ್ರ ನ್ಯೂಸ್: ಅಪಾರವಾದ ಭ್ರಷ್ಟಾಚಾರ, ನಿರುದ್ಯೋಗ ಹಾಗೂ ಬಡತನಗಳಿಂದ ರೋಸಿ ಹೋಗಿದ್ದ ನೇಪಾಳಿಗರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದು, ಜೆನ್ ಝೀ ಕ್ರಾಂತಿಗೆ ಸರ್ಕಾರವೇ ಉರುಳಿಹೋಗಿದೆ.
ಪ್ರಧಾನ ಮಂತ್ರಿ ನಿವಾಸಕ್ಕೆ ಬೆಂಕಿ ಇಟ್ಟ ಯುವ ಜನತೆ ದುಡ್ಡು ಮಾಡಿ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದ
ರಾಜಕಾರಣಿಗಳನ್ನು ಬೀದಿ ಬೀದಿಗಳಲ್ಲಿ ಬಟ್ಟೆ ಹರಿಯುವ ಹಾಗೆ ಥಳಿಸಿ ತಮ್ಮ ಬಹು ದಿನಗಳ ಆಕ್ರೋಶವನ್ನು ಹೊರಹಾಕಿದ್ದಾರೆ.
ತಾವೇ ಮತ ಹಾಕಿ ಗೆಲ್ಲಿಸಿದ ನಾಯಕರ ಕಳ್ಳಾಟವನ್ನು ಸಹಿಸಲಾಗದ ಜನತೆ ಈ ಬೃಹತ್ ಹೆಜ್ಜೆಯನ್ನಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ನೆರೆಯ ನೇಪಾಳದಲ್ಲಿ ನಿರ್ಮಾಣವಾದ ಕೂಡಲೇ ಭಾರತದ ಕೆಲ ಮಾಧ್ಯಮಗಳು ಅಲ್ಲಿಗೆ ತೆರಳಿ ವರದಿ ಮಾಡುವ ಕೆಲಸವನ್ನು ಮಾಡಲು ಯತ್ನಿಸಿವೆ.
ಆದರೆ ಅಲ್ಲಿನ ಜನರು ಮಾತ್ರ ಇದನ್ನು ವಿರೋಧಿಸಿದ್ದಾರೆ. ಭಾರತದ ಮಾಧ್ಯಮಗಳು ಪ್ರಶ್ನೆ ಮಾಡಲು ತೆರಳಿದಾಗ ನೀವು ನಿಮ್ಮ ದೇಶದ ಸರ್ಕಾರದ ಕುನ್ನಿಗಳು, ಗೋಧಿ ಮೀಡಿಯಾ ಎಂದು ಹಂಗಿಸಿದ್ದಾರೆ. ನಾವು ಇಲ್ಲಿ ನಿಮಗಾಗಿ ಬಂದಿದ್ದೇವೆ, ನಿಮಗೆ ಸಹಾಯಕ್ಕೆ ನಿಲ್ಲುತ್ತೇವೆ ಎಂದು ಪತ್ರಕರ್ತರು ಹೇಳಿದರೂ ಅದನ್ನು ಸ್ವಾಗತಿಸದ ನೇಪಾಳದ ಯುವ ಜನತೆ ಮೊದಲು ನಿಮ್ಮದನ್ನು ನೋಡಿಕೊಳ್ಳಿ, ನಿಮ್ಮ ದೇಶದ ಜನರ ಜತೆ ನಿಲ್ಲಿ, ಆಮೇಲೆ ನಮ್ಮ ಜತೆ ನಿಲ್ಲುವ ಬಗ್ಗೆ ಯೋಚಿಸಿ ಎಂದು ನೇರವಾಗಿಯೇ ಹೇಳಿದ್ದಾರೆ.
ಸದ್ಯ ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇತ್ತ ಕಾಂಗ್ರೆಸ್ ಹಿಂಬಾಲಕರು ಬಿಜೆಪಿ ಜಪ ಮಾಡುವ ಮಾಧ್ಯಮಗಳಿಗೆ ಸರಿಯಾದ ಮನ್ನಣೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದ್ದಾರೆ.







