ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡುವುದನ್ನು ಕಣ್ಣಾರೆ ಕಂಡಿದ್ದೇನೆ| ಸೌಜನ್ಯ ಪ್ರಕರಣದ ಕುರಿತು ಮಂಡ್ಯ ಮೂಲದ ಮಹಿಳೆಯಿಂದ ಎಸ್ಐಟಿ‌ಗೆ ದೂರು

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಚಿನ್ನಯ್ಯ ದೂರು ನೀಡಿದ ಆಧಾರದ ಮೇಲೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವಿಚಾರಣೆ ಭರದಿಂದ ಸಾಗಿದೆ. ಇನ್ನು ಚಿನ್ನಯ್ಯನನ್ನು ಆರೋಪಿಯನ್ನಾಗಿ ವಶಕ್ಕೆ ಪಡೆದಿರುವ ಎಸ್‌ಐಟಿ ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲೂ ಸಹ ಹಲವು ದಾಖಲೆಗಳ ಹುಡುಕಾಟ ನಡೆಸಿದೆ.

Ad Widget ... ..

ಅಲ್ಲದೇ ಸುಜಾತ ಭಟ್‌ ಎಂಬ ವೃದ್ಧೆ ಸಹ ತನ್ನ ಮಗಳು ಅನನ್ಯ ಭಟ್‌ ಇದೇ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದು, ಆಕೆಯ ಅಸ್ತಿಪಂಜರ ಹುಡುಕಿಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಪ್ರಕರಣವನ್ನೂ ಸಹ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಸದ್ಯ ಪ್ರಕರಣದ ಬಗ್ಗೆ ಮತ್ತೊಂದು ಸಾಕ್ಷಿ ನಾನು ಕಿಡ್ನಾಪ್‌ ಆದದ್ದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಮಂಡ್ಯ ಮೂಲದ ಮಹಿಳೆಯೊಬ್ಬರು ಮುಂದೆ ಬಂದಿದ್ದಾರೆ.

Ad Widget

2012ರ ಅಕ್ಟೋಬರ್‌ 8ರ ರಾತ್ರಿ ಮಂಡ್ಯದಿಂದ ರೈಲಿನಲ್ಲಿ ಕುಕ್ಕೆ ಹಾಗೂ ಧರ್ಮಸ್ಥಳಕ್ಕೆ ತಮ್ಮ ಸಂಬಂಧಿ ಮಹಿಳೆ ಹಾಗೂ ತಾನು ಇಬ್ಬರು ತೆರಳಿದ್ದೆವು ಎಂದ ಮಹಿಳೆ ತನಗಿದ್ದ ಚರ್ಮ ರೋಗದ ಚಿಕಿತ್ಸೆಗೆಂದು ಶಾಂತಿವನದ ಬಳಿ ತೆರಳಿದ್ದೆವು ಎಂದು ತಿಳಿಸಿದರು.

ಆದರೆ ಅಲ್ಲಿ ಜನರಿಲ್ಲದೇ ಕಾಡು ಪ್ರದೇಶದ ಹಾಗೆ ಇದ್ದ ಕಾರಣ ಗೇಟ್‌ ಒಳಗೆ ಪ್ರವೇಶಿಸಲು ಹಿಂದೇಟು ಹಾಕಿ ಯಾರನ್ನಾದರೂ ಕೇಳಿ ಆಮೇಲೆ ಒಳಹೋಗೋಣ ಎಂದು ಎದುರುಗಡೆ ಇದ್ದ ಬಸ್‌ ತಂಗುದಾಣದಲ್ಲಿ ಕುಳಿತುಕೊಂಡಿದ್ದೆವು, ಆ ಸಮಯದಲ್ಲಿ ಬೈಕ್‌ನಲ್ಲಿ ಯುವಕರು ಅಲ್ಲಲ್ಲೇ ಸುತ್ತಾಡಿದರು. ಬಳಿಕ ಓರ್ವ ಆಟೊ ಡ್ರೈವರ್‌ ಬಂದು ಇಲ್ಲಿ ಯಾಕೆ ಕುಳಿತಿದ್ದೀರ ಎಂದು ಪ್ರಶ್ನಿಸಿದ. ಈ ರೀತಿ ಚಿಕಿತ್ಸೆಗೆ ಬಂದದ್ದಾಗಿ ತಿಳಿಸಿದ ಬಳಿಕ ವೈದ್ಯರು ಇಲ್ಲ ಇನ್ನೂ ಮೂರ್ನಾಲ್ಕು ತಿಂಗಳು ಬರುವುದಿಲ್ಲ ಇಲ್ಲಿಂದ ಹೊರಡಿ ಎಂದ ಎಂದರು.

ಬಳಿಕ ತಾನೇ ಆಟೊದಲ್ಲಿ ಉಚಿತವಾಗಿ ಬಿಟ್ಟುಕೊಡುವುದಾಗಿ ಹೇಳಿದ ಆತ ಮೊಬೈಲ್‌ನಲ್ಲಿ ಕರೆ ಮಾಡಿ ಯಾರಿಗೋ ತಾವು ಇಲ್ಲಿ ಕುಳಿತಿರುವುದನ್ನು ಹೇಳುತ್ತಿದ್ದ ಎಂದರು. ಇನ್ನು ತನ್ನ ಜೊತೆಗಿದ್ದ ಮಹಿಳೆ ಮೂತ್ರ ವಿಸರ್ಜನೆ ಮಾಡಬೇಕಾದ ಕಾರಣ ಪಕ್ಕದಲ್ಲಿದ್ದ ಮರದ ಸಮೀಪ ತೆರಳಿದವು. ಆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಡೆದುಕೊಂಡು ಹೋಗುತ್ತಿದ್ದಳು. ಆಕೆ ಸ್ವಲ್ಪ ದೂರ ಹೋದ ಕೂಡಲೇ ಜೋರಾಗಿ ಕಿರುಚಿಕೊಂಡಳು. ಓಡಿ ಹೋಗಿ ನೋಡಿದರೆ ಆಕೆಯ ಕೈಯನ್ನು ಹಿಂದೆ ತಿರುಗಿಸಿ ಬಲವಂತ ಮಾಡುತ್ತಿದ್ದರು. ಬಳಿಕ ಆಕೆಯನ್ನು ಬಹುಶಃ ಕಾರಿನಲ್ಲಿ ಕೂರಿಸಿದರು ಎನಿಸುತ್ತೆ. ತಮ್ಮನ್ನು ಇಲ್ಲಿಂದ ಹೋಗಿ ಎಂದ ಆಟೊ ಸಹ ಅಲ್ಲೇ ಅಡ್ಡಲಾಗಿ ನಿಂತಿತ್ತು ಎಂದು ತಿಳಿಸಿದರು.

ಅಷ್ಟೇ ಅಲ್ಲದೇ ಅದೇ ಸಮಯಕ್ಕೆ ವ್ಯಕ್ತಿಯೋರ್ವ ಅಲ್ಲೇ ಮುಂದೆ ನಿಂತಿದ್ದ. ಆತನ ಬಳಿ ಹೋಗಿ ಈ ಕುರಿತು ಪ್ರಶ್ನೆ ಮಾಡಿದಾಗ ಆಕೆ ಮನೆಯಲ್ಲಿ ಜಗಳ ಮಾಡಿಕೊಂಡಿದ್ದಳಂತೆ, ಅದಕ್ಕೆ ಅವರ ಮನೆಯವರು ಕರೆದುಕೊಂಡುಹೋದರು ಎಂದು ಹೇಳಿದ. ಅದಕ್ಕೆ ಈ ರೀತಿ ಬಲವಂತವಾಗಿ ಕರೆದುಕೊಂಡು ಹೋಗುತ್ತಾರಾ ಎಂದು ಮರು ಪ್ರಶ್ನೆ ಹಾಕಿದಾಗ ನೀವು ಯಾರು, ಯಾವ ಊರು ಎಂದೆಲ್ಲ ಗದರಿದ. ಬಳಿಕ ನಾವು ಅಲ್ಲಿಂದ ಬಸ್‌ ನಿಲ್ದಾಣಕ್ಕೆ ನಡೆದುಕೊಂಡೇ ಬಂದೆವು ಎಂದು ಮಾಹಿತಿ ಬಿಚ್ಚಿಟ್ಟರು.

ಇನ್ನು ತನ್ನ ಕುರಿತ ಮಾಹಿತಿಯನ್ನು ಈಗಲೇ ಹೇಳುವುದಿಲ್ಲ, ಸಮಯ ಬಂದಾಗ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ. ಈ ಮಹಿಳೆ ದೂರವಾಣಿಯ ಮೂಲಕ ಎಸ್‌ಐಟಿಗೆ ಕಿಡ್ನಾಪ್‌ ನೋಡಿರುವುದಾಗಿ ದೂರು ನೀಡಿದ್ದರು.

Leave a Comment

Your email address will not be published. Required fields are marked *