ಸಮಗ್ರ ನ್ಯೂಸ್:;ಮನೆ ಮೇಲೆ ಧರೆ ಕುಸಿದು ಬಿದ್ದು ಜನರು ಸಿಲುಕಿದ್ದ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ತಾಯಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದ್ದು, ಆದರೆ ಇಬ್ಬರು ಮಕ್ಕಳು ಕೂಡಾ ಅಸುನೀಗಿದ್ದಾರೆ. ಘಟನೆಯಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಒಟ್ಟು ಮೂವರ ರಕ್ಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಮಂಜನಾಡಿ ಗ್ರಾಮದ ಉರುಮನೆ ಮದಪಾಡಿಯಲ್ಲಿ ಶುಕ್ರವಾರ (ಮೇ 30) ಮುಂಜಾನೆ ಮನೆಯ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದ ಬಿದ್ದಿತ್ತು. ತೋಟದ ನಡುವಿರುವ ಮನೆಯ ಮೇಲೆ ಬೃಹತ್ ಮರ ಸಹಿತ ಸುಮಾರು 30 ಅಡಿ ಧರೆ ಕುಸಿದು ಬಿದ್ದಿತ್ತು. ಶುಕ್ರವಾರ ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.
ಘಟನೆ ನಡೆದ ವೇಳೆ ಮನೆ ಯಜಮಾನ ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮಾ, ಪುತ್ರ ಸೀತಾರಾಮ ಮತ್ತು ಅವರ ಪತ್ನಿ ಅಶ್ವಿನಿ ಮಕ್ಕಳಾದ ಆರುಷ್, ಆರ್ಯನ್ ಮಲಗಿದ್ದರು. ಸೀತಾರಾಮ ಅವರು ಮನೆಯಿಂದ ಹೊರಬರಲು ಯಶಸ್ವಿಯಾಗಿದ್ದಾರೆ.
ಪ್ರೇಮಾ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅವರ ಮೃತದೇಹವೂ ಮಣ್ಣಿನಡಿಯಲ್ಲೇ ಇದೆ. ಕಾಂತಪ್ಪ ಪೂಜಾರಿ ಅವರನ್ನು ರಕ್ಷಿಸಲಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಅಶ್ವಿನಿ ಅವರನ್ನು ರಕ್ಷಣೆ ಮಾಡಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ.
ಕಾಂತಪ್ಪ ಪೂಜಾರಿ ಅವರ ಪತ್ನಿ ಪ್ರೇಮ (54 ವ) ಮಕ್ಕಳಾದ ಮೂರು ವರ್ಷದ ಮಗು ಆರ್ಯನ್, ಎರಡು ವರ್ಷ ಪ್ರಾಯದ ಆರುಷ್ (2 ವರ್ಷ) ಮೃತಪಟ್ಟಿದ್ದಾರೆ. ಆರುಷ್ ನನ್ನು ಮಣ್ಣಿನಡಿಯಿಂದ ತೆಗೆದು ರಕ್ಷಣೆ ಮಾಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ.
ಎನ್ ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಪ್ರೇಮ ಅವರ ಮೃತದೇಹವನ್ನು ಹುಡುಕಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರಿದಿದೆ.