ಚಾಮರಾಜನಗರ: 23 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡಿದ್ದ ಪೊಲೀಸ್ ಅಧಿಕಾರಿ, ಚಾಮರಾಜನಗರ ಪಟ್ಟಣ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ಸಿದ್ದರಾಜನಾಯ್ಕ (59 ವ.) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ವೀರಪ್ಪನ್ 1993 ರಲ್ಲಿ ಹೊಡೆದಿದ್ದ ಗುಂಡುಗಳನ್ನು ತಲೆ ಮತ್ತು ಕಣ್ಣಿನಲ್ಲಿ ಇಟ್ಟುಕೊಂಡೇ ಕಳೆದ 23 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ, ಜೀವನ ಸಾಗಿಸಿದ್ದ ಪಿಎಸ್ ಐ ನಿವೃತ್ತಿಗೆ ಕೇವಲ 5 ದಿನ ಬಾಕಿ ಇರುವಾಗ ನಿಧನರಾಗಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಆಗಿದ್ದರೂ ದರ್ಪ, ಗತ್ತು ಪ್ರದರ್ಶಿಸದೇ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಸಿದ್ದರಾಜನಾಯ್ಕ ಅವರು, ಕಳೆದ ವರ್ಷ ಲಾಕ್ಡೌನ್ ನಲ್ಲಿ ಯುವಕರನ್ನೂ ನಾಚಿಸುವಂತೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದರು. ಮಾನವೀಯ ಅಧಿಕಾರಿಯಾಗಿ ದುಡಿಯುತ್ತಿದ್ದ ಅವರ ನಿಧನಕ್ಕೆ ಸಹೋದ್ಯೋಗಿಗಳು ಹಾಗು ಅಪಾರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
1993ರಲ್ಲಿ ರಾಮಾಪುರ ಠಾಣೆಯಲ್ಲಿ ಸಿದ್ದರಾಜನಾಯ್ಕ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವೀರಪ್ಪನ್ ಗುಂಡಿನ ಮಳೆಗೈದು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನಿರ್ದಯವಾಗಿ ಕೊಂದಿದ್ದನು. ಈ ಗುಂಡಿನ ಚಕಮಕಿ ವೇಳೆಯಲ್ಲಿ 7 ಮದ್ದುಗುಂಡುಗಳು ಸಿದ್ದರಾಜನಾಯ್ಕ ಅವರ ದೇಹದೊಳಹೊಕ್ಕಿದ್ದವು. ಆ ಪೈಕಿ 4 ಗುಂಡುಗಳನ್ನು ಹೊರತೆಗೆದ ವೈದ್ಯರು, ತಲೆಯಲ್ಲಿ 2 ಮತ್ತು ಎಡಗಣ್ಣಿನ ಒಳಗೊಂದು ಗುಂಡಿನ ತುಣುಕುಗಳನ್ನು ಜೀವಕ್ಕೆ ಅಪಾಯವಾಗಲಿದೆ ಎಂದು ಹಾಗೆಯೇ ಬಿಟ್ಟಿದ್ದರು.
















