ವಿಟ್ಲ: ವಾಸಿಸಲು ಸರಿಯಾದ ಮನೆ ಇರದೆ ಹರಕಲು ಜೋಪಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವರಿಗೆ ಮುಸ್ಲಿಂ ಐಕ್ಯ ವೇದಿಕೆ ಪೆರುವಾಯಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಮುಚ್ಚಿರಪದವು ಎಂಬಲ್ಲಿ ವಾಸಿಸುತ್ತಿದ್ದ ಸಂಜೀವ ಮೊಗೇರ ಎಂಬವರ ಹಳೆಯ ಮನೆ ಈ ಬಾರಿಯ ಮಳೆಗಾಲ ಆರಂಭದಲ್ಲಿ ಹಾನಿಯಾಗಿ ಶೋಚನೀಯ ಸ್ಥಿತಿ ತಲುಪಿತ್ತು. ಅವರು ಹೊಸಮನೆ ನಿರ್ಮಿಸಿಕೊಳ್ಳುವಲ್ಲಿ ಅಶಕ್ತರಾಗಿದ್ದ ಕಾರಣ ಪರಿಸ್ಥಿತಿ ಮನಗಂಡು ಪೆರುವಾಯಿ ಮುಸ್ಲಿಂ ಐಕ್ಯ ವೇದಿಕೆಯವರು ಸುಮಾರು ಒಂದು ಲಕ್ಷ ರೂಪಾಯಿ ಸ್ವಂತ ಖರ್ಚಿನಲ್ಲಿ ಹೊಸದೊಂದು ಸಣ್ಣ ಸುಸಜ್ಜಿತ ಮನೆ ನಿರ್ಮಿಸಿ ಕೊಟ್ಟು ಬಡಕುಟುಂಬಕ್ಕೆ ಆಸರೆಯಾಗಿದ್ದಾರೆ. ಸಾಮಾಗ್ರಿಗಳಿಗೆ ಅಂದಾಜು ಒಂದು ಲಕ್ಷ ಖರ್ಚಾಗಿದ್ದು ನಿರ್ಮಾಣ ಕೆಲಸಗಳನ್ನು ಸ್ವತಃ ವೇದಿಕೆಯ ಯುವಕರೇ ಮಾಡಿದ್ದಾರೆ.






