ಪತ್ನಿಯ ದ್ವಿಪತಿತ್ವ ಕಂಡು ಹಿಡಿಯಲು ತಾನೇ ಗೂಢಾಚಾರನಾದ ಟೆಕ್ಕಿ| ಸಿನಿಮೀಯ ಶೈಲಿಯಲ್ಲಿ ಮಂಗಳೂರು ಮೂಲದ ಯುವತಿಯ ಮೋಸ‌ ಬಯಲಿಗೆಳೆದ ಪತಿ

ಸಮಗ್ರ ನ್ಯೂಸ್: ಹೆಂಡತಿ ಮೊದಲ ಮದುವೆಯ ವಿಷ್ಯ ಕಂಡುಹಿಡಿಯಲೇ ತಾನೇ ಗೂಢಾಚಾರಕನಾದ ಮಂಗಳೂರು ಟೆಕ್ಕಿಯ ಕಥೆ ಇದು. ಆತ ಸಾಫ್ಟ್‌ವೇರ್ ಇಂಜಿನಿಯರ್, ಕೈತುಂಬ ಸಂಬಳ ತೆಗೆದುಕೊಂಡು ಆರಾಮ ಬದುಕು ಕಟ್ಟಿಕೊಂಡಿದ್ದ. ಆದರೆ ಆತನ ಬದುಕಿಗೆ ಒಬ್ಬ ಹೆಣ್ಣು ಬಂದಳು. ಆಕೆ ಕೂಡ ಟೆಕ್ಕಿಯಾಗಿದ್ದಳು. ಮದುವೆಯಾದ ಬಳಿಕ ಹೆಂಡತಿಯ ಚಲನವಲನದ ಮೇಲೆ ಗಂಡನಿಗೆ ಅನುಮಾನ ಬಂದಿದೆ. ಹೀಗಾಗಿ ಉದ್ಯೋಗದ ಸೋಗಿನಲ್ಲಿ ಝೂಮ್‌ ಮೀಟಿಂಗ್‌ ನಲ್ಲಿ ಪತ್ನಿಯನ್ನು ಅಪರಿಚಿತನಂತೆ ಮಾತನಾಡಿಸಿದಾಗ ಅದಾಗಲೇ ಆಕೆಗೆ ಮೊದಲು ಮದುವೆಯಾಗಿದೆ ಎಂಬುದನ್ನು ಕಂಡು ಹಿಡಿದಿದ್ದಾನೆ. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ಆತನಿಗೆ ಈಗ ವಿಚ್ಚೇದನ ಸಿಕ್ಕಿದೆ.

Ad Widget .

ತನ್ನ ಪತ್ನಿಯ ದ್ವಿಪತ್ನಿತ್ವ, ಮಾನಸಿಕ ಕಿರುಕುಳ ಮತ್ತು ದ್ರೋಹದ ಬಗ್ಗೆ ದಾಖಲೆಗಳನ್ನು ಕಲೆ ಹಾಕಿ ಮಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಹೋರಾಟದ ಬಳಿಕ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಅಭಿಷೇಕ್‌ (ಹೆಸರು ಬದಲಾಯಿಸಲಾಗಿದೆ) ತನ್ನ ಪತ್ನಿ ವಿನುತಾಳ (ಹೆಸರು ಬದಲಾಯಿಸಲಾಗಿದೆ) ದ್ವಿಪತ್ನಿತ್ವ, ಮಾನಸಿಕ ಕಿರುಕುಳ ಮತ್ತು ದ್ರೋಹದ ಬಗ್ಗೆ ಪಕ್ಕಾ ಪುರಾವೆಗಳನ್ನು ಸಿದ್ಧಪಡಿಸಿ, ಅಂತಿಮವಾಗಿ ವಿಚ್ಛೇದನ ತೀರ್ಪು ತಮ್ಮ ಕಡೆಗೆ ಆಗುವಂತೆ ಮಾಡಿ ಜಯ ಸಾಧಿಸಿದ್ದಾರೆ.

Ad Widget . Ad Widget .

2018ರ ಡಿಸೆಂಬರ್ 31 ರಂದು ಬೆಂಗಳೂರಿನಲ್ಲಿ, ತಿಂಗಳಿಗೆ ₹2 ಲಕ್ಷ ಆದಾಯ ಹೊಂದಿದ್ದ ಅಭಿಷೇಕ್‌, ಬಂಟ್ವಾಳ ತಾಲೂಕಿನ ಟೆಕ್ ಉದ್ಯೋಗಿ ವಿನುತಾಳನ್ನು ವಿವಾಹವಾದರು. ವಿವಾಹದ ನಂತರ ಅವರು ಕೆ.ಆರ್.ಪುರಂನ ತಮ್ಮ ಮನೆಯಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಎಲ್ಲವೂ ಸರಾಗವಾಗಿದ್ದರೂ, ಕೆಲವೇ ತಿಂಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕುಗಳು ಕಾಣಿಸತೊಡಗಿದವು. ಅಭಿಷೇಕ್‌ಗೆ ಪತ್ನಿ ವಿನುತಾ ಅವರ ಐದು ವರ್ಷಗಳ ಹಿಂದಿನ ಗೆಳೆಯನೊಂದಿಗೆ ಆಪ್ತ ಹಣಕಾಸು ವ್ಯವಹಾರಗಳು ಕಂಡುಬಂದವು. ಮದುವೆಗೆ ಆರು ತಿಂಗಳ ಹಿಂದೆಯೇ ಆ ಸಂಬಂಧ ಮುಕ್ತಾಯವಾಗಿದೆ ಎಂದು ವಿನುತಾ‌ ಹೇಳಿದ್ದರೂ, ಅವರ ಸಂಬಂಧ ಮುಂದುವರಿದಿತ್ತು ಎಂಬುದು ಅಭಿಷೇಕ್‌ ಅವರ ಶಂಕೆಗೆ ಕಾರಣವಾಯಿತು. ಪತ್ನಿಯು ತನ್ನ ಮಾಜಿ ಗೆಳೆಯನ ಬಗ್ಗೆ ಹೇಳಿ ನಾವಿಬ್ಬರೂ ಹೇಗೆ “ಚೆನ್ನಾಗಿ ಹೊಂದಿಕೊಳ್ಳುತ್ತಿದ್ದೆವು” ಎಂಬ ಬಗ್ಗೆ ಹೆಮ್ಮೆಯಿಂದ ಹೇಳುತ್ತಾ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದುದು ಅಭಿಷೇಕ್‌ನ ಮನಸ್ಸಿಗೆ ತುಂಬಾ ನೋವು ತಂದವು.

ಕೇವಲ ಪತಿ ಅಲ್ಲ, ಖಾಸಗಿ ಗೂಢಾಚಾರನಾದ ಟೆಕ್ಕಿ:
2021ರ ಮಾರ್ಚ್‌ನಲ್ಲಿ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(ia) ಅಡಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ ಅಭಿಷೇಕ್‌, ಪತ್ನಿಯ ವಿರುದ್ಧ ಕಠಿಣ ಆರೋಪಗಳನ್ನು ಮಾಡಿದ್ದಾರೆ. ಇನ್ನೊಬ್ಬನ ಜೊತೆಗೆ ಸಂಬಂಧ ಇರುವ ಬಗ್ಗೆಯೂ ಆರೋಪಿಸಿದರು. ಅವರ ತನಿಖೆಯ ಭಾಗವಾಗಿ, ಅವರು ಉದ್ಯೋಗ ಸಂದರ್ಶನದ ರೂಪದಲ್ಲಿ ಪತ್ನಿಯನ್ನು ಜೂಮ್‌ ಮೂಲಕ ಮಾತನಾಡಿಸಿದರು. ಈ ಸಂಭಾಷಣೆಯಲ್ಲಿ, ವಿನುತಾ ತನ್ನ ಮೊದಲ ಮದುವೆ ಮುಗಿದು ಹೋದ ಕಥೆ ಎಂದು ತಿಳಿಸಿದ್ದು, ಇದು ಅಭಿಷೇಕ್‌ನ ಅನುಮಾನಕ್ಕೆ ಬಲ ನೀಡಿತು. ಅಭಿಷೇಕ್‌ ಆರ್‌ಟಿಐ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪ್ಯಾನ್ ಡಿಟೇಲ್ಸ್, ಪಾಸ್‌ಪೋರ್ಟ್ ಪ್ರಯಾಣ ದಾಖಲೆಗಳು, ಮದುವೆ ದಾಖಲೆಗಳು ಮತ್ತು ಹೆಸರು ಬದಲಾವಣೆಯ ಅಫಿಡವಿಟ್ ಸೇರಿದಂತೆ ಹಲವು ದಾಖಲೆಗಳನ್ನು ಪಡೆದು ನ್ಯಾಯಾಲಯಕ್ಕೆ ಒದಗಿಸಿದರು. ಈ ಎಲ್ಲಾ ದಾಖಲೆಗಳು, 2023ರ ಮಾರ್ಚ್‌ನಲ್ಲಿ ವಿನುತಾ ಅವರ ಎರಡನೇ ಮದುವೆ ಆಗಿರುವುದು ನಿಜವೆಂಬುದನ್ನು ಸಾಬೀತುಪಡಿಸಿದವು.

ಮುಂಬೈಯ ಡೊಂಬಿವಲಿಯ ಪ್ಯಾನೇಶಿಯಾದಲ್ಲಿ ವ್ಯಕ್ತಿಯೊಂದಿಗೆ 2023 ಮಾರ್ಚ್ 13ರಂದು ಎರಡನೇ ವಿವಾಹವಾಗಿರುವುದನ್ನು ಪತ್ತೆಹಚ್ಚಿದ್ದರು. ಅದು ಮಹಾರಾಷ್ಟ್ರ ಗೆಜೆಟ್ ಕಚೇರಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ ವಿನುತಾ ತನ್ನ ಹೆಸರನ್ನು ಅನಿತಾ ಎಂದು ಬದಲಾಯಿಸಿಕೊಂಡಿದ್ದರು. ಜತೆಗೆ ವಿನುತಾಳ ಸಂಬಂಧಿಕರ ಸಾಮಾಜಿಕ ಜಾಲತಾಣದಲ್ಲಿ ವಿವಾಹದ ಫೋಟೋ ಸಂಗ್ರಹಿಸಿ ಮಂಗಳೂರು ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಗಂಡ ಅಭಿಷೇಕ್‌ ವಿರುದ್ಧ ಪತ್ನಿ ವಿನುತಾ ಕೌಟುಂಬಿಕ ಹಿಂಸೆ, ಬಲವಂತದ ಗರ್ಭಪಾತ, ಕೆಲಸ ತ್ಯಜಿಸಲು ಒತ್ತಡ, ₹10 ಲಕ್ಷ ನಗದು ಮತ್ತು 30 ಪೌಂಡ್ ಚಿನ್ನಾಭರಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಎರಡು ಕಡೆಯ ವಾದಗಳನ್ನು ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನಂತರ, 2024ರ ಏಪ್ರಿಲ್ 23 ರಂದು ನ್ಯಾಯಾಲಯವು ವಿಚ್ಛೇದನವನ್ನು ಮಂಜೂರು ಮಾಡಿತು. ಮಹಿಳೆಯ ಶಾಶ್ವತ ಜೀವನಾಧಾರ ಹಾಗೂ ಮಾಸಿಕ ₹60,000 ಉಳಿವಿನ ಹಣದ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಪತಿಯ ದೂರಿನಲ್ಲಿ ಪ್ರಮಾಣಪೂರ್ವಕ ಸತ್ಯತೆಯು ಕಂಡುಬಂದುದರಿಂದ, ಪತ್ನಿಯ ಬೇಡಿಕೆಗಳಿಗೆ ನ್ಯಾಯಾಲಯ ಸಮರ್ಥನೆ ನೀಡಲಿಲ್ಲ.

ಇದಲ್ಲದೇ, ಅಭಿಷೇಕ್‌ಗೆ ಸೇರಿದ ಎಲ್ಲಾ ಚಿನ್ನಾಭರಣವನ್ನು ವಿನುತಾ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಷ್ಟೇ ಅಲ್ಲದೆ, ಮೋಕದ್ದಮೆ ವೆಚ್ಚವಾಗಿ ₹30,000 ಪಾವತಿಸಬೇಕು ಎಂದು ಕೂಡ ನ್ಯಾಯಾಲಯ ತೀರ್ಪು ನೀಡಿತು. ಈ ಘಟನೆಯು ವೈವಾಹಿಕ ಸಂಬಂಧಗಳ ಪವಿತ್ರತೆಯ ಕುರಿತಾದ ಪ್ರಶ್ನೆಗಳನ್ನು ಎತ್ತುವುದರ ಜೊತೆಗೆ, ನಂಬಿಕೆಯ ಮೇಲಿನ ದ್ರೋಹ ಮತ್ತು ಸುಳ್ಳು ಸಂಬಂಧಗಳ ಪರಿಣಾಮ ಎಷ್ಟು ಗಂಭೀರವಾಗಬಹುದು ಎಂಬುದನ್ನೂ ಸಾರುತ್ತದೆ. ಈ ತೀರ್ಪು ಬಲವಂತದಿಂದ ಬದುಕು ಸಾಗಿಸಲು ಯಾರಿಗೂ ಒತ್ತಾಯಿಸುವುದಿಲ್ಲ ಎಂಬ ನ್ಯಾಯಾಲಯದ ಸಂದೇಶವನ್ನೂ ನೀಡುತ್ತದೆ.

Leave a Comment

Your email address will not be published. Required fields are marked *