ಸಮಗ್ರ ನ್ಯೂಸ್: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ನಿಂತಿಲ್ಲ. ಪಹಲ್ಗಾಮ್ನಲ್ಲಿ 28 ಪ್ರವಾಸಿಗರನ್ನ ಅಮಾನುಷವಾಗಿ ಕೊಂದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯನ್ನ ಶುರು ಮಾಡಿದೆ. ಆದರೆ ಇದರ ಮಧ್ಯೆಯೇ ಇನ್ನೊಬ್ಬ ನಾಗರಿಕನನ್ನ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಭಾನುವಾರ ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಸಾಮಾಜಿಕ ಕಾರ್ಯಕರ್ತನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲೇ ಪ್ರಾಣ ಹೋಗಿತ್ತು.
ಪಾಕಿಸ್ತಾನ ಬೆಂಬಲಿತ ಉಗ್ರರಿಗೆ ಕಾಶ್ಮೀರದ ಇಂಚಿಂಚೂ ಗೊತ್ತು. ಅಲ್ಲಿನ ಮನೆಗಳಲ್ಲೇ ಅವರಿಗೆ ಆಶ್ರಯ ಕೊಡಲಾಗುತ್ತದೆ..ಊಟ ಹಾಕಿ ಸಲುಹಲಾಗುತ್ತದೆ ಎಂಬ ಆರೋಪ ಕೇಳಿಬರ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಇದೀಗ ಉಗ್ರರು ಸಾಮಾಜಿಕ ಕಾರ್ಯಕರ್ತನನ್ನ ಮನೆಯೊಳಗೆ ನುಗ್ಗಿ ಹೊಡೆದಿದ್ದಾರೆ. ಅಂದರೆ ಅವರ ಮನೆಗೆ ನುಗ್ಗುವಷ್ಟು ಧೈರ್ಯ ಬರುತ್ತದೆ ಎಂದರೆ ಅಲ್ಲೆಲ್ಲೋ ಅಕ್ಕಪಕ್ಕದ ಮನೆಯವರ ಬೆಂಬಲ, ಸ್ಥಳೀಯರ ಸಹಕಾರ ಇರಲೇಬೇಕು ಎಂಬುದು ಸ್ಪಷ್ಟವಾಗುತ್ತದೆ. ಅಂದಹಾಗೇ, ಮೃತ ಸಾಮಾಜಿಕ ಕಾರ್ಯಕರ್ತನನ್ನ ಗುಲಾಮ್ ರಸೂಲ್ ಮಗ್ರೆ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು ಇವರನ್ನ ಹತ್ಯೆ ಮಾಡೋಕೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ.