ಸಮಗ್ರ ನ್ಯೂಸ್: ಕೆಲವರು ದೆವ್ವ, ಭೂತ ಇದ್ಯಾವುದನ್ನು ನಂಬಲ್ಲ. ಅದ್ಯಾವುದೂ ಭೂಮಿ ಮೇಲೆ ಇಲ್ಲ. ಸತ್ತ ಮೇಲೆ ಎಲ್ಲರೂ ಮಣ್ಣಲ್ಲಿ ಹೂತು ಹೋಗುತ್ತೇವೆ ಎನ್ನುತ್ತಾರೆ. ಇನ್ನು ಕೆಲವರು ದೆವ್ವಗಳು ಇವೆ ಎಂಬ ಬಲವಾದ ನಂಬಿಕೆಗಳನ್ನು ಹೊಂದಿರುತ್ತಾರೆ. ಕೆಲ ಅನುಭವವಗಳನ್ನೂ ವ್ಯಕ್ತಪಡಿಸುವುದು ಸಾಮಾನ್ಯ.
ಸದ್ಯ ದ.ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಇಂಥಹುದ್ದೇ ಘಟನೆ ನಡೆದಿದೆ. ದೆವ್ವದ ಕಾಟಕ್ಕೆ ಇಡೀ ಕುಟುಂಬವೇ ಭಯದಲ್ಲೇ ಕಳೆದ ಮೂರು ತಿಂಗಳಿನಿಂದ ಜೀವನ ಸಾಗಿಸುತ್ತಿದ್ದು, ಆತಂಕದಲ್ಲಿ ಮುಳುಗಿದ್ದಾರೆ.
ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬುವವರ ಮನೆಯಲ್ಲಿ ಯಾರೋ ಅಗೋಚರವಾಗಿ ಓಡಾಡಿದಂತೆ ಭಾಸವಾಗುವುದು, ಪಾತ್ರಗಳು ಇದ್ದಕ್ಕಿದ್ದಂತೆ ಬೀಳುವುದು, ಬಟ್ಟೆಗಳಿಗೆ ಏಕಾಏಕಿಯಾಗಿ ಬೆಂಕಿ ಬೀಳುವ ಅನುಭವಗಳು ಆಗುತ್ತಿವೆಯಂತೆ. ಇದರಿಂದ ತೀವ್ರ ಭಯವಾಗುತ್ತಿದೆ ಎಂದು ಉಮೇಶ್ ಶೆಟ್ಟಿ ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಇನ್ನು ಅಚ್ಚರಿಯ ವಿಚಾರವೆಂದರೆ, ವಿಚಿತ್ರವಾದ ಮುಖವೊಂದು, ಪ್ರೇತ ಎನ್ನಲಾದ ಚಹರೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ದೆವ್ವನೇ ಎಂದು ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಬೆಡ್ರೂಂನಲ್ಲಿ ಮನೆಯ ಬಾಲಕಿ ಈ ಚಿತ್ರ ಕ್ಲಿಕ್ಕಿಸಿದ್ದಾಳಂತೆ. ಸದ್ಯ ದೆವ್ವ ಇದೇ ಎನ್ನುವ ಆ ಕುಟುಂಬವು ಅದರ ಕಾಟಕ್ಕೆ ನಲುಗಿ ಹೈರಾಣಾಗಿದೆ. ಗ್ರಾಮದ ಜನ ಭಯಗೊಂಡಿದ್ದಾರೆ!
ಸದ್ಯ ದೆವ್ವದ ಕಾಟದಿಂದ ಉಮೇಶ್ ಶೆಟ್ಟಿ ಕುಟುಂಬ ಬೇಸತ್ತು ಹೋಗಿದ್ದು, ಪರಿಹಾರ ಸಿಗದೇ ಪರದಾಡುತ್ತಿದ್ದು, ನೆರವಿಗಾಗಿ ಅಂಗಲಾಚಿದ್ದಾರೆ.