ಸಮಗ್ರ ನ್ಯೂಸ್: ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಮರಳಿನ ಕೊರತೆ ಎದುರಾಗದು. ಹಲವು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಂಭೂರು ಹಾಗೂ ಮರವೂರಿನ ಅಣೆಕಟ್ಟಿನಲ್ಲಿ ಹೂಳೆತ್ತುವ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತಿದೆ.
ಸಿಹಿ ನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. “ಮರಳು ಮಿತ್ರ’ ಆಯಪ್ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗೆ 10 ಮೆಟ್ರಿಕ್ ಟನ್ ಮರಳು ಪಡೆಯಬಹುದು. ಜಿಎಸ್ಟಿ ಮತ್ತು ಸಾಗಾಟ ವೆಚ್ಚದೊಂದಿಗೆ ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳನ್ನು ಖರೀದಿಸಬಹುದು. ಹೀಗಾಗಿ ಯಾರೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದರು.
ಈಗಾಗಲೇ ಹೂಳೆತ್ತುವಿಕೆ ಮೂಲಕ ಅದ್ಯಪಾಡಿಯಲ್ಲಿ 9 ಸಾವಿರ ಹಾಗೂ ಶಂಭೂರು ಮರಳು ಸ್ಟಾಕ್ ಯಾರ್ಡ್ನಲ್ಲಿ 12 ಸಾವಿರ ಮೆಟ್ರಿಕ್ ಟನ್ ಮರಳನ್ನು ಸಂಗ್ರಹಿಸಿಡಲಾಗಿದೆ. ಜಿಲ್ಲೆಯ ನಿರ್ಮಾಣ ಕಾಮಗಾರಿಯ ಬೇಡಿಕೆಗೆ ತಕ್ಕಂತೆ ಮರಳು ಲಭ್ಯವಿದೆ. ಹೊರ ಜಿಲ್ಲೆ ಯಿಂದಲೂ ಮರಳಿಗೆ ಬೇಡಿಕೆ ಇದ್ದರೂ ಅನುಮತಿ ನೀಡಿಲ್ಲ. ಸದ್ಯ ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆ ಮಾಡಲಾಗುವುದು. ಯಾವುದೇ ರೀತಿಯ ಗೊಂದಲ, ಆತಂಕ ಬೇಡ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ