ಸಮಗ್ರ ನ್ಯೂಸ್: ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು. ಆ ಸಂಬಂಧದಲ್ಲಿ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ಅವರಿಗೆ ವಿಚ್ಛೇದನ ನೀಡಿದೆ ಎಂದು ಮಾಜಿ ಪ್ರಧಾನಿ, ರಾಜ್ಯ ಸಭಾ ಸದಸ್ಯ ಎಚ್ಡಿ ದೇವೇಗೌಡ ಹೇಳಿದ್ದಾರೆ. ಈ ಮೂಲಕ ಮಲ್ಲಿಕಾರ್ಜುನ ಖರ್ಗೆಗೆ ತಿರುಗೇಟು ನೀಡಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ್ದ ಖರ್ಗೆ ಅವರು, “ದೇವೇಗೌಡರು ಮೊದಲು ಕಾಂಗ್ರೆಸ್ ಜೊತೆ ಪ್ರೀತಿಯಲ್ಲಿದ್ದರು, ಆದರೆ ಕೊನೆಗೆ ಮೋದಿ (ಬಿಜೆಪಿ) ಅವರ ಜೊತೆ ಮದುವೆಯಾದರು” ಎಂದು ಹಾಸ್ಯಮಯವಾಗಿ ಕಾಲೆಳೆದಿದ್ದರು. ಇದಕ್ಕೆ ಬೆಂಗಳೂರಿನಿಂದ ಪತ್ರ ಬರೆದಿರುವ ದೇವೇಗೌಡರು, ಅದೇ ಮದುವೆ – ವಿಚ್ಛೇದನದ ರೂಪಕಗಳನ್ನು ಬಳಸಿ ಮಾರ್ಮಿಕವಾಗಿ ಮತ್ತು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
“ನನ್ನ ಹಳೆಯ ಗೆಳೆಯ ಖರ್ಗೆ ಅವರು ಮದುವೆಯ ಭಾಷೆಯಲ್ಲೇ ಮಾತನಾಡಿದ್ದಾರೆ. ಅದಕ್ಕೆ ನಾನು ಅದೇ ಭಾಷೆಯಲ್ಲಿ ಉತ್ತರಿಸುವುದಾದರೆ, ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆ ಆಗಿತ್ತು. ಆ ಸಂಬಂಧದಲ್ಲಿ ಕಿರುಕುಳ ಮತ್ತು ಹಿಂಸೆ ಇದ್ದ ಕಾರಣ ನಾನು ಅವರಿಗೆ ‘ವಿಚ್ಛೇದನ’ ನೀಡಬೇಕಾಯಿತು” ಎಂದು ದೇವೇಗೌಡರು ಬರೆದಿದ್ದಾರೆ.
2018 ರ ರಾಜಕೀಯ ವಿದ್ಯಮಾನಗಳನ್ನು ನೆನಪಿಸಿಕೊಂಡಿರುವ ಗೌಡರು, ” 2018 ರಲ್ಲಿ ಗುಲಾಂ ನಬಿ ಆಜಾದ್ ಅವರು ಬಂದು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರು. ಆದರೆ, ನಾನು ಅದಕ್ಕೆ ಒಪ್ಪಿರಲಿಲ್ಲ. ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಎಲ್ಲರ ಸಮ್ಮುಖದಲ್ಲೇ ಹೇಳಿದ್ದೆ. ಆಗ ಸಿದ್ದರಾಮಯ್ಯ ಕೂಡ ಅಲ್ಲಿದ್ದರು. ಆದರೆ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕೆಂದು ಪಟ್ಟು ಹಿಡಿದರು” ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.







