ಸಮಗ್ರ ನ್ಯೂಸ್: ಅನುದಾನದ ವಿಚಾರದಲ್ಲಿ ಕಾಂಗ್ರೆಸ್ಸಿಗರು ಸುಳ್ಳಿನ ಮೇಲೆ ಹೇಳುತ್ತಾ ತಿರುಗಾಡುತ್ತಿದ್ದಾರೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ಒಂದೊಂದು ಸುಳ್ಳಿನಿಂದ ಅವರ ಬಟ್ಟೆ ಬಿಚ್ಚುತ್ತೇನೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಉಪ್ಪಿನಂಗಡಿಯಲ್ಲಿ ಬಿಜೆಪಿ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಬಾಯಿ ಬಿಟ್ಟರೆ ಬರೇ ಸುಳ್ಳುನ್ನೇ ಹೇಳೋ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತಾಕತ್ ಅಂತ ಇದ್ರೆ ನಮ್ಮ ವೇದಿಕೆಗೆ ಬಂದು ಯಾವೆಲ್ಲ ಅನುದಾನ ಬಂದಿದೆ ಅದ್ದನ್ನ ತಿಳಿಸಲಿ. ಅಶೋಕ್ ರೈಗಳು ಜನರಿಗೆ ಹೇಳಿದ ಒಂದೊಂದು ಸುಳ್ಳಿಗೆ ಅವರ ಬಟ್ಟೆಯನ್ನ ಬಿಚ್ಚುತ್ತೇನೆ ಎಂದು ಕಿಡಿ ಕಾರಿದರು.
ಜನರನ್ನ ಯಾವತ್ತಿಗೂ ಲಘುವಾಗಿ ಪರಿಗಣಿಸಬೇಡಿ. ನಿಮ್ಮ ಸುಳ್ಳುಗಳನ್ನ ನಂಬುವಂತ ಜನ ಈಗ ಇಲ್ಲ. ನಿಮ್ಮ ಪ್ಯಾಕೇಜ್ ಗಳ ಬಗ್ಗೆ ನಿಮ್ಮ ಗಂಜಿಕೇಂದ್ರಗಳಲ್ಲಿ ಕೆಲಸ ಮಾಡುವವರು ಒಪ್ಪಿಕೊಳ್ಳಬಹುದು. ಬಿಜೆಪಿಯವರು ಜನರಿಗೆ ಗೌರವ ಕೊಡುತ್ತೇವೆ. ನಾವು ನಮ್ಮ ಕಾರ್ಯಕರ್ತರನ್ನಾಗಲಿ, ಬೆಂಬಲಿಗರನ್ನಾಗಲಿ ಗಂಜಿಕೇಂದ್ರಗಳಲ್ಲಿ ಉಳಿಸೋದಿಲ್ಲ. ಪ್ರತಿಯೊಬ್ಬರನ್ನು ಕೂಡಾ `ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್, ಸಬ್ ಕ ಪ್ರಯಾಸ್’ ಎಂಬಂತೆ ಇದರಲ್ಲಿ ಜಾತಿ ಇಲ್ಲ. ಧರ್ಮ ಕೂಡ ಇದರಲ್ಲಿ ಇಲ್ಲ. ಸರ್ವರನ್ನು ಒಟ್ಟುಗೂಡಿಸಿ ಮುಂದುವರಿಯುವಂತ ಕೆಲಸವನ್ನು ಮೋದಿಜಿಯವರು ಮಾಡುತ್ತಾರೆ. ಆದ್ರೆ ಕಾಂಗ್ರೆಸ್ ನವರು ಏನು ಮಾಡುತ್ತಾರೆ. ಅಲ್ಪಸಂಖ್ಯಾತರ ತಲೆಗೆ ಹುಳುವನ್ನು ಬಿಡುತ್ತಾರೆ. ಕಾಂಗ್ರೆಸ್ ಇಲ್ಲಂದ್ರೆ ನೀವು ಬದುಕೋದಿಲ್ಲ ಅಂತಾರೆ. ಒಂದು ವೇಳೆ ಕಾಂಗ್ರೆಸ್ ನಾಳೆ ನಾಶ ಆಯ್ತು ಅಂದುಕೊಳ್ಳಿ. ಹಾಗಾದ್ರೆ ಈ ದೇಶದಲ್ಲಿ ಅಲ್ಪಸಂಖ್ಯಾತರು ಬದುಕಲು ಸಾಧ್ಯವಿಲ್ವಾ?. ಅವರನ್ನ ಯಾರಾದ್ರೂ ಅರಬ್ಬಿ ಸಮುದ್ರದಲ್ಲಿ ಹಾಕುತ್ತಾರಾ. ಮುಸಲ್ಮಾನರೇ ಇರಲಿ, ಕ್ರಿಶ್ಚಿಯನ್ ಇರಲಿ ಬಿಜೆಪಿ ಅವರ ವಿರೋಧಿಗಳು ಅಲ್ಲ. ಹಿಂದೂ ಆಗಿದ್ರೂ ದೇಶದ್ರೋಹವನ್ನು ನಾವು ಸಹಿಸೋದಿಲ್ಲ. ಬಿಜೆಪಿಯವರು ದೇಶ ಮೊದಲು ಎಂಬ ದೃಷ್ಟಿಕೋನ ಇಟ್ಟವರು. ದೇಶಕ್ಕಾಗಿ ನಾವು ಮೊದಲು ಬದುಕಬೇಕು. ಆಮೇಲೆ ಸಮಾಜಕ್ಕಾಗಿ ಬದುಕಬೇಕು. ಮತ್ತೆ ನಾವು ಸಂಸಾರಕ್ಕಾಗಿ ಬದುಕಬೇಕು. ಆದ್ರೆ ಈ ತತ್ವ ಕಾಂಗ್ರೆಸ್ಸಿನಲ್ಲಿ ಇಲ್ಲ. ಕಾಂಗ್ರೆಸ್ ನವರು ಒಂದೇ ಒಂದು ಸಂಸಾರಕ್ಕಾಗಿ ಬದುಕುವವರು. ಇಡೀ ಕಾಂಗ್ರೆಸ್ ಒಂದೇ ಕುಟುಂಬಕ್ಕಾಗಿ ಗುಲಾಮಗಿರಿ ಮಾಡುತ್ತೆ. ಬಿಜೆಪಿ ಪಕ್ಷದಲ್ಲಿ ಯಾರು ಯಾರಿಗೂ ಗುಲಾಮಗಿರಿ ಮಾಡಲ್ಲ. ನಾವೂ ಯಾವತ್ತಿಗೂ ಈ ದೇಶಕ್ಕೆ ಋಣಿಯಾಗಿರಬೇಕು ಎಂದವರು ಹೇಳಿದರು.
ನಾರಾಯಣ ಸ್ವಾಮಿ ನೀಡಿದ ಹೇಳಿಕೆಗೆ ಇದೀಗ ಪುತ್ತೂರು ಶಾಸಕ ಅಶೋಕ್ ರೈ ತಿರುಗೇಟು ನೀಡಿದ್ದು, ಈ ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ.. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ ಎಂದು ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಛಲವಾದಿ ನಾರಾಯಣ ಸ್ವಾಮಿ ನಾಯಿ ಥರ ನಾಯಿಗೆ ಯಾರು ಒಳ್ಳೇರು, ಯಾರು ಕೆಟ್ಟವರು ಎಂದು ಗೊತ್ತಾಗುದಿಲ್ಲ, ಅದು ಯಾರು ಬಂದರೂ ಬೊಗಳುತ್ತದೆ. ಛಲವಾದಿ ಕೂಡಾ ನಾಯಿನ ತರಹ, ಅವನಿಗೆ ಏನು ಎಂತ ಎಂದು ಗೊತ್ತಾಗೋದಿಲ್ಲ. ಪಾಪ ಬೊಗಳಿದೆ, ಅದಕ್ಕೆ ನಾವೇನೂ ಕಲ್ಲು ಎಸೆಯಲು ಹೋಗೋದಿಲ್ಲ, ಪ್ರಾಣಿ ಅಲ್ವಾ ಎಂದಿದ್ದಾರೆ.
ಛಲವಾದಿ ಒಬ್ಬ ನರಸಣ್ಣನ ತರಹ ಪುಂಗಿ ಊದಿಕೊಂಡು ಬರುತ್ತಾರಲ್ಲಾ, ಪಾಪ ಅವರಿಗಾದರೂ ಸ್ವಲ್ಪ ಬುದ್ದಿ ಇದೆ, ಇವನಿಗೆ ಬುದ್ಧಿ ಇಲ್ಲ, ಅವನನ್ನು ಬಿಜೆಪಿಯವರು ಯಾಕೆ ಕರೆಯುತ್ತಾರೋ ಗೊತ್ತಿಲ್ಲ. ಅವ ಛಲವಾದಿ ನಾರಾಯಣ ಸ್ವಾಮಿಯಲ್ಲ, ಅವ ಛಲವಾದಿ ನಾಲಾಯಕ್ ಸ್ವಾಮಿ ಎಂದು ವ್ಯಂಗ್ಯವಾಡಿದ್ದಾರೆ.
ನಾನು ನನ್ನ ಬಿಜೆಪಿ ಬಂಧುಗಳ ಹತ್ರ ವಿನಂತಿ ಮಾಡುತ್ತೇನೆ. ಇಂತವರೆಲ್ಲಾ ಮೇಲಿನಿಂದ ಬಂದ ಏನೆಲ್ಲಾ ಬೊಗಳಿ ಹೋಗುತ್ತದೆ. ಯಾರಿಗೆ ಎಷ್ಟು ವರ್ಷ ಅಧಿಕಾರ ಇರುತ್ತದೆ, ಯಾರು ಎಂಎಲ್ಎ,ಮಂತ್ರಿ ಆಗುತ್ತಾರಾ ಗೊತ್ತಿಲ್ಲ, ಅದೆಲ್ಲಾ ಪರ್ಮನೆಂಟ್ ಕೂಡಾ ಅಲ್ಲ, ಇಂತರನ್ನೆಲ್ಲಾ ಕರೆತಂದು ನಮ್ಮ ಬಾಂಧವ್ಯವನ್ನು ಯಾಕೆ ಹಾಳು ಮಾಡೋದು, ಅನುದಾನದ ವಿಚಾರದಲ್ಲಿ ಯಾವುದೇ ಛಾಲೆಂಜಿಗೂ ನಾನು ರೆಡಿ, ಅವರು ಕರೆದಲ್ಲಿ ನಾನು ಹೋಗೋದಿಲ್ಲ, ನಾನು ಶಾಸಕ, ನಾನು ಕರೆದಲ್ಲಿ ಅವರು ಬರಲಿ, ಉತ್ತರ ಕೊಡುವ ಕೆಲಸ ಮಾಡುತ್ತೇನೆ ಎಂದರು.







