ಸಮಗ್ರ ನ್ಯೂಸ್: ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಗಂಭೀರ ರಾಜಕೀಯ ಚರ್ಚೆ ತೀವ್ರ ಗದ್ದಲ, ಆರೋಪ-ಪ್ರತ್ಯಾರೋಪ ಹಾಗೂ ಅಸಭ್ಯ ಭಾಷೆಯ ಬಳಕೆಯಿಂದ ಸಂಪೂರ್ಣ ನಿಯಂತ್ರಣ ತಪ್ಪಿದಂತಾಯಿತು. ನೂರು ಪ್ರತಿಶತ ಹಣ ಲೂಟಿ ನಡೆದಿದೆ ಎಂದು ಆರೋಪಿಸಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಅಶೋಕ್ ಆಗ್ರಹಿಸಿದ ಬೆನ್ನಲ್ಲೇ, ಆಡಳಿತ ಪಕ್ಷ ಮತ್ತು ವಿಪಕ್ಷ ಸದಸ್ಯರ ನಡುವೆ ಭಾರೀ ವಾಗ್ವಾದ ನಡೆಯಿತು.
“ನೂರಕ್ಕೆ ನೂರರಷ್ಟು ಹಣ ಹೊಡೆದಿರೋದು ಸತ್ಯ. ಆ ಮಂತ್ರಿ ಮೊದಲು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ತನಿಖೆ ಮುಗಿದು ಆರು ತಿಂಗಳ ಬಳಿಕ ನಿರ್ದೋಷಿಯಾಗಿ ಹೊರಬರಲಿ. ಅಲ್ಲಿವರೆಗೆ ಆರ್.ಬಿ. ತಿಮ್ಮಾಪುರ ಸಚಿವ ಸ್ಥಾನದಲ್ಲಿ ಕುಳಿತುಕೊಳ್ಳಬಾರದು” ಎಂದು ಅಶೋಕ್ ಸದನದಲ್ಲಿ ಆಗ್ರಹಿಸಿದರು.
ಈ ಹೇಳಿಕೆಗೆ ಶಾಸಕ ಶಿವಲಿಂಗೇಗೌಡ ತೀವ್ರ ಪ್ರತಿಕ್ರಿಯೆ ನೀಡಿದ್ದು, “ನೀವು ಬರೀ ಸುಳ್ಳು ಹೇಳ್ತಿದ್ದೀರಿ. ನಿಮಗೆ ಇದನ್ನೆಲ್ಲ ಹೇಳೋಕೆ ಏನು ಹಕ್ಕು?” ಎಂದು ಪ್ರಶ್ನಿಸಿದರು. ಇದರಿಂದ ಸದನದಲ್ಲಿ ವಿಪಕ್ಷದ ಸದಸ್ಯರು ಏಕಕಾಲಕ್ಕೆ ಘೋಷಣೆ ಕೂಗಲಾರಂಭಿಸಿ ಗದ್ದಲ ಉಂಟಾಯಿತು.
ವಿಪಕ್ಷದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಧರಣಿಗೆ ಇಳಿದಾಗ, ಶಿವಲಿಂಗೇಗೌಡ ಅವರು “ಮೊದಲು ಇವರನ್ನು ಸದನದಿಂದ ಹೊರ ಹಾಕಿ” ಎಂದು ಸ್ಪೀಕರ್ಗೆ ಆಗ್ರಹಿಸಿದರು. ಈ ಸಂದರ್ಭ ಸ್ಪೀಕರ್, “ನೀವು ಹೀಗೆ ಗದ್ದಲ ಮಾಡುತ್ತಿದ್ದರೆ ಸದನವನ್ನು ರಾತ್ರಿ 12 ಗಂಟೆವರೆಗೆ ನಡೆಸಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಆದರೂ ಗದ್ದಲ ಶಮನವಾಗಲಿಲ್ಲ.
ವಿಪಕ್ಷದ ಘೋಷಣೆಗಳಿಗೆ ಪ್ರತಿಯಾಗಿ ಶಾಸಕ ಶಿವಲಿಂಗೇಗೌಡ ಅವರು ಏಕವಚನದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರನ್ನು ಉದ್ದೇಶಿಸಿ ಅಸಭ್ಯ ಮತ್ತು ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದರು. ನಿಯಂತ್ರಣ ತಪ್ಪಿದ ಶಾಸಕರ ಮಾತು, ಬಾಯಿಗೆ ಬಂದಂತೆ ಮಾತನಾಡಿದ ಶಿವಲಿಂಗೇಗೌಡ. ವಿಪಕ್ಷ ಶಾಸಕರ ಧರಣಿ, ಘೋಷಣೆಗೆ ಪ್ರತಿಯಾಗಿ ಮನಸೋ ಇಚ್ಛೆ ಮಾತನಾಡಿ ಬಿಜೆಪಿ ಜೆಡಿಎಸ್ ಶಾಸಕರ ವಿರುದ್ಧ ಶಿವಲಿಂಗೇಗೌಡ ಕೆಂಡಾಮಂಡಲವಾದರು. ಥೂ ಎಂದು ಉಗಿದರು. ಕೋತಿಗಳ ತರ ಕೂಗ್ತಿರೋರು ನೀವು, ನಿಮಗೆ ಮಾನ ಮರ್ಯಾದೆ ಇದೆಯಾ..? ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ. ಅಯೋಗ್ಯರು ನೀವು ಥೂ ಎಂದು ಶಿವಲಿಂಗೇಗೌಡ ಉಗಿದರು. ಶಾಸಕ ಶರಣ ಸಲಗರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೀನು ಹೆಂಡ್ತಿಯನ್ನ ತಹಶಿಲ್ದಾರ್ ಹತ್ತಿರ ಬಿಟ್ಟು ದುಡ್ಡು ಹೊಡೆದಿದ್ದಿಯಾ ಎಂದು ಆರೋಪಿಸಿದರು.
ಥೂ ನಿಮ್ಮ ಜನಕ್ಕೆ ಬೆಂಕಿ ಹಾಕ ಎಂದು ಆಕ್ರೋಶ ಹೊರಹಾಕಿದಾಗ, ಜೆಡಿಎಸ್ ಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದ ಎಂದು ವಿಪಕ್ಷ ಶಾಸಕರು ಕೂಗಿದರು. ಇದಕ್ಕೆ ಪ್ರತಿಕ್ರಯಿಸಿದ ಶಿವಲಿಂಗೇಗೌಡ ನಿಮ್ಮ ಅಪ್ಪನಿಗೆ ಹಾಕಿದ್ದೆ, ನಿಮ್ ಅಪ್ಪ.. ನಿಮ್ ಅಪ್ಪ.. ನಿಮ್ ಅಪ್ಪ. ಮಾನ ಮಾರ್ಯಾದೆ ಇದೆಯಾ ಅಯೋಗ್ಯರು. ನಾಯಿಗಳಿಗಿಂತ ಕಡೆ ನೀವು.. ನಾಯಿಗಳು ನೀವು . ಅವುಗಳಿಗಾದರೂ ನಿಯತ್ತು ಇದೆ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.







