ಸಮಗ್ರ ನ್ಯೂಸ್: ಜಿಲ್ಲಾ ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಭಾರೀ ಗೊಂದಲ ಮತ್ತು ಹೈಡ್ರಾಮ ನಡೆದಿದೆ. ಈ ಪ್ರತಿಭಟನೆಯ ನೂಕುನುಗ್ಗಲಿನ ನಡುವೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಚಿನ್ನದ ಸರ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಕೋಟೆ ಪೊಲೀಸ್ ಠಾಣೆಯ ಎಎಸ್ಐ ಅಮೃತಾಬಾಯಿ ಅವರು ಕರ್ತವ್ಯದಲ್ಲಿದ್ದ ವೇಳೆ ಸುಮಾರು 60 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಹೊಸದಾಗಿ ಚಿನ್ನದ ಸರ ಖರೀದಿಸಿದ್ದ ಅಮೃತಾಬಾಯಿ, ಸರ ನಾಪತ್ತೆಯಾದ ನಂತರ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಪ್ರತಿಭಟನೆಯ ಸಂದರ್ಭ ಉಂಟಾದ ಗೊಂದಲ ಮತ್ತು ನೂಕುನುಗ್ಗಲಿನ ವೇಳೆ ಸರಗಳ್ಳತನ ನಡೆದಿದೆ ಶಂಕೆ ವ್ಯಕ್ತವಾಗಿದೆ.
ಪ್ರತಿಭಟನೆ ವೇಳೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡ ಕಳ್ಳರು ಕೈಚಳಕ ತೋರಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತಿಭಟನೆ ಸಂದರ್ಭದ ವೀಡಿಯೊ ಕ್ಲಿಪ್ಪಿಂಗ್ಗಳನ್ನು ಪರಿಶೀಲನೆ ನಡೆಸುತ್ತಿದ್ದು, ಸರಗಳ್ಳನ ಪತ್ತೆಗೆ ಬಲೆಬೀಸಿದ್ದಾರೆ.






