ಸಮಗ್ರ ನ್ಯೂಸ್: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಜೀವಾಂತ್ಯಕ್ಕೆ ಶರಣಾದ ಹೃದಯ ವಿದ್ರಾವಕ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದಲ್ಲಿ ಸಂಭವಿಸಿದೆ.
ಮೃತನನ್ನು ದಿ. ವಾಲ್ಟರ್ ರೋಡ್ರಿಗಸ್ ವಾಲ್ಟರ್ ರೋಡ್ರಿಗಸ್ ಅವರ ಪುತ್ರ ಚೇತನ್ ಎಂದು ಗುರುತಿಸಲಾಗಿದೆ. ಚೇತನ್ ತನ್ನ ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಜೀವಾಂತ್ಯ ಮಾಡಿಕೊಂಡಿದ್ದಾನೆ.
ಪದವಿ ಶಿಕ್ಷಣ ಮುಗಿಸಿದ್ದ ಚೇತನ್, ಮನೆಯಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದನು. ಆದರೆ, ಕಳೆದ ಕೆಲ ಸಮಯದಿಂದ ಆತ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು ಮತ್ತು ಇದಕ್ಕಾಗಿ ಪುತ್ತೂರಿನ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದನು ಎಂದು ತಿಳಿದುಬಂದಿದೆ.
ದುರಂತ ಸಂಭವಿಸಿದ ದಿನ, ಬುಧವಾರದಂದು, ಚೇತನ್ ಎಂದಿನಂತೆ ಶಿಕ್ಷಕಿಯಾಗಿರುವ ತನ್ನ ತಾಯಿಯನ್ನು ಅವರ ಕಾಲೇಜಿಗೆ ಬಿಟ್ಟು ಬಂದಿದ್ದನು. ತಾಯಿಯನ್ನು ಬಿಟ್ಟು ಬಂದ ಬಳಿಕ ಮನೆಗೆ ಮರಳಿದ ಆತ ಕೋಣೆಯ ಬಾಗಿಲನ್ನು ಒಳಗಿನಿಂದ ಭದ್ರಪಡಿಸಿ ಈ ಕೃತ್ಯ ಎಸಗಿದ್ದಾನೆ.
ಮಧ್ಯಾಹ್ನದ ವೇಳೆಗೆ ತಾಯಿ ಮೊಬೈಲ್ ಕರೆ ಮಾಡಿದಾಗ ಚೇತನ್ ಕರೆ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ತಾಯಿ ಮನೆಯ ಮೇಲೆ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಕರೆ ಮಾಡಿ ವಿಚಾರಿಸುವಂತೆ ಹೇಳಿದ್ದರು. ಕೆಲಸಗಾರ ಕೋಣೆಯ ಬಳಿ ಬಂದಾಗ ಬಾಗಿಲು ಚಿಲಕ ಹಾಕಿರುವುದು ಕಂಡುಬಂದಿದ್ದು, ಕಿಟಕಿಯ ಸಂದಿಯಿಂದ ನೋಡಿದಾಗ ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ದೃಢಪಟ್ಟಿದೆ.
ಈ ಘಟನೆ ಸಂಬಂಧ ಚೇತನ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






